ಬೆಂಗಳೂರು: ರಾಜ್ಯದ 5,800 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೆ.ಸಿ. ಕೊಂಡಯ್ಯ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಚುನಾವಣೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಆಯೋಗಕ್ಕೆ ಇದೆ’ ಎಂದು ಹೇಳಿತು.
‘ಸರ್ಕಾರದೊಂದಿಗೆ ಜೂನ್ನಲ್ಲಿ ಸಮಾಲೋಚನೆ ನಡೆಸಲಾಯಿತು. ಮತ್ತೆ ಸಮಾಲೋಚನೆ ನಡೆಸಿ ಆಯೋಗದ ಸ್ವಾತಂತ್ರ್ಯ ಉಲ್ಲಂಘಿಸಲು ಆಗುವುದಿಲ್ಲ’ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ತಿಳಿಸಿದರು.
‘ಚುನಾವಣೆ ಮುಂದೂಡುವ ವಿಷಯದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಕೋವಿಡ್ ಕಾರಣದಿಂದ ನಾಗರಿಕರ ಆರೋಗ್ಯದ ಬಗ್ಗೆಯಷ್ಟೇ ಸರ್ಕಾರ ಯೋಚಿಸುತ್ತಿದೆ’ ಎಂದು ಅಡ್ವೊಕೇಟ್ ಜನರಲ್ ಹೇಳಿದರು.
‘ಮಾಲ್ಗಳು, ಧಾರ್ಮಿಕ ಕೇಂದ್ರಗಳು, ಚಲನಚಿತ್ರ ಮಂದಿರಗಳನ್ನು ಸರ್ಕಾರ ತೆರೆದಿದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ವಿಷಯದಲ್ಲಷ್ಟೇ ಕಾರಣ ಹೇಳುತ್ತಿದೆ. ಸಂವಿಧಾನ ನೀಡಿರುವ ಅಧಿಕಾರದ ಪ್ರಕಾರ ಚುನಾವಾಣಾ ಆಯೋಗ ರಾಜ್ಯಪಾಲರಿಗೆ ಮಾಹಿತಿ ಸಲ್ಲಿಸಬೇಕೆ ವಿನಹ ಸರ್ಕಾರಕ್ಕೆ ಅಲ್ಲ’ ಎಂದು ಅರ್ಜಿದಾರರೊಬ್ಬರ ಪರ ವಕೀಲ ರವಿವರ್ಮಕುಮಾರ್ ತಿಳಿಸಿದರು.
‘ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ನೇಮಕ ಆಗಿರುವ ಆಡಳಿತಾಧಿಕಾರಿಗಳ ಅವಧಿ ಡಿಸೆಂಬರ್ನಲ್ಲಿ ಮುಕ್ತಾಯವಾಗಲಿದೆ. ಅದನ್ನು ವಿಸ್ತರಿಸಲು ಆಗುವುದಿಲ್ಲ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.