ಬೆಂಗಳೂರು: ‘ಸ್ಥಿರಾಸ್ತಿಗಳ ಮೇಲಿನ ತೆರಿಗೆ ಹೆಚ್ಚಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಲು ಹೊರಟಿದೆ. ಜನರು ‘ಬಿ’ ಖಾತಾವನ್ನು ‘ಎ’ ಖಾತೆಗೆ ಬದಲಿಸಿಕೊಳ್ಳಲು ಆರೇಳು ಲಕ್ಷ ರೂಪಾಯಿ ವೆಚ್ಚಮಾಡಬೇಕಾಗುತ್ತದೆ’ ಎಂದು ಜೆಡಿಎಸ್ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದ ಹಳ್ಳಿಗಳ ನಿವೇಶನಗಳಿಗೆ, ಪ್ರತಿ ಚದರ ಮೀಟರ್ಗೆ ಗರಿಷ್ಠ ₹250 ಸುಧಾರಣಾ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಗ್ರೇಟರ್ ಬೆಂಗಳೂರು ಅಡಿಯಲ್ಲಿ ಪ್ರತಿ ಚದರ ಅಡಿಗೆ ಗರಿಷ್ಠ ₹500 ಸುಧಾರಣಾ ಶುಲ್ಕ ವಿಧಿಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ’ ಎಂದು ಆರೋಪಿಸಿದರು.
‘ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಬಿಲ್ಡರ್ಗಳಿಗೆ ಅನುಕೂಲವಾಗಲಿ ಎಂದು ಸರ್ಕಾರವು ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ. ಜತೆಗೆ ಬರಿದಾಗಿರುವ ಬೊಕ್ಕಸವನ್ನು ತುಂಬಿಸಿಕೊಳ್ಳಲು ತೆರಿಗೆ ಹೆಚ್ಚಿಸಿದೆ. ಬೆಂಗಳೂರಿನ ಜನರು ಇನ್ನು ಮುಂದೆ 10 ಪಟ್ಟು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದರು.
‘ಸರ್ಕಾರವು, ‘ಬಿ’ ಖಾತಾವನ್ನು ‘ಎ’ ಖಾತಾ ಮಾಡಿಕೊಡುತ್ತೇವೆ ಎಂದು ಹೇಳಿ ಜನರನ್ನು ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಜೆಡಿಎಸ್ ಕಾನೂನು ಹೋರಾಟ ನಡೆಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.