ಆರ್. ಅಶೋಕ
ಬೆಂಗಳೂರು: ಬೆಂಗಳೂರಿಗೆ ಮಾರಕವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಬಿಜೆಪಿ ಶಾಸಕರ ಜತೆಗೂಡಿ ಜಿಬಿಎ ಮೊದಲ ಸಭೆಯನ್ನು ಬಹಿಷ್ಕರಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗಾಗಲೇ ಕೌನ್ಸಿಲ್ನಲ್ಲಿ ಹೋರಾಟ ಮಾಡಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಹಾಕಿದ್ದೇವೆ’ ಎಂದರು.
‘ಇದು ಬೆಂಗಳೂರು ಜನಪ್ರತಿನಿಧಿಗಳ ಕತ್ತು ಹಿಸುಕುವ ಮತ್ತು ಕಾನೂನು ಬಾಹಿರ ಕ್ರಮವಾಗಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿರುವುದರಿಂದ, ಇಂತಹ ಸಭೆಗೆ ಹೋಗಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದಾಗಿ ಎಲ್ಲ ಐದು ಮಹಾನಗರಪಾಲಿಕೆಗಳು ನೆಗೆದು ಬಿದ್ದುಹೋಗಿವೆ. ಎಲ್ಲ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಕೌನ್ಸಿಲ್ಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದು ಸಂವಿಧಾನ ವಿರೋಧವಾಗಿರುವುದರಿಂದ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ’ ಎಂದರು.
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸೃಷ್ಟಿಸಿರುವ ಜಿಬಿಎ ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರವಾಗಿದೆ ಎಂದು ದೂರಿದರು.
ಬಿಬಿಎಂಪಿ ಅಡಿಯಲ್ಲಿ ಚುನಾವಣೆ ಮಾಡಿದ್ದರೆ ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ಜಿಬಿಎ ಮಾಡಿದ್ದಾರೆ. ಐದು ಪಾಲಿಕೆಗಳಲ್ಲಿ ಕನಿಷ್ಠ ಒಂದೆರಡಾದರೂ ಗೆಲ್ಲಬೇಕು ಎಂಬುದೇ ಅವರ ಉದ್ದೇಶ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.