
ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟದ ಹೆಸರಿನಲ್ಲಿ ₹1,464 ಕೋಟಿ ಮೊತ್ತದ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ, ಸರ್ಕಾರದಿಂದ ₹355 ಕೋಟಿ ಮೊತ್ತದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿದ್ದ ವಂಚಕ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆಯು ಪತ್ತೆ ಮಾಡಿದೆ.
ಈ ಸಂಬಂಧ ನಾಲ್ವರನ್ನು ಬಂಧಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ನಾಲ್ವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ, ನ್ಯಾಯಾಧೀಶರು ಆದೇಶಿಸಿದ್ದಾರೆ.
2025ರ ನವೆಂಬರ್ನಲ್ಲಿ ಬೆಂಗಳೂರು ನಗರದ ಎಸ್ಜೆಪಿ ರಸ್ತೆ, ಜೆ.ಸಿ ರಸ್ತೆ, ಕಲಾಸಿಪಾಳ್ಯ, ಬಿವಿಕೆ ಅಯ್ಯಂಗಾರ್ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ
ಅಧಿಕಾರಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್
ವಂಚನೆ ನಡೆಯುತ್ತಿರುವುದನ್ನು ಪತ್ತೆ ಮಾಡಿದ್ದರು. ಮುಂದುವರಿದ ಕಾರ್ಯಾ ಚರಣೆ ಭಾಗವಾಗಿ ಬೆಂಗಳೂರು ಮತ್ತು ತಮಿಳುನಾಡಿನ ಹಲವೆಡೆ ಶೋಧ ನಡೆಸಿದ್ದರು. ಕಟ್ಟಡ ನಿರ್ಮಾಣ
ಸಾಮಗ್ರಿಗಳ ಮಾರಾಟದ ಹೆಸರಿ ನಲ್ಲಿ ದೊಡ್ಡ ಜಾಲವೊಂದು, ತೆರಿಗೆ ವಂಚನೆಯಲ್ಲಿ ತೊಡಗಿಕೊಂಡಿರುವುದನ್ನು ಪತ್ತೆ ಮಾಡಿದ್ದರು.
ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದ ರೇವತಿ ಮತ್ತು ಇ.ಪ್ರತಾಪ್ ಎಂಬವರು ಹಲವು ಷೆಲ್ ಕಂಪನಿಗಳನ್ನು (ದಾಖಲೆಗಳಷ್ಟೇ ಇದ್ದು, ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದ ಕಂಪನಿಗಳು) ಸ್ಥಾಪಿಸಿರುವುದನ್ನು ಪತ್ತೆ ಮಾಡಲಾಗಿತ್ತು. ಈ ಇಬ್ಬರೂ ಪವರ್ ಸ್ಟೀಲ್ಸ್ ಆ್ಯಂಡ್ ಸಿಮೆಂಟ್ಸ್, ಪಿ.ಆರ್.ಕನ್ಸ್ಟ್ರಕ್ಷನ್ಸ್, ಎಸ್.ವಿ.ಟ್ರೇಡರ್ಸ್, ಎಸ್ಆರ್ಎಸ್ ಸ್ಟೀಲ್ ಟ್ರೇಡರ್ಸ್ ಎಂಬ ಷೆಲ್ ಕಂಪನಿಗಳನ್ನು ನಡೆಸುತ್ತಿದ್ದರು. ಈ ಕಂಪನಿಗಳ ಮಧ್ಯೆಯೇ ಕಬ್ಬಿಣ, ಸಿಮೆಂಟ್ ಪೂರೈಕೆ ವಹಿವಾಟು ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಜತೆಗೆ ಕೆಲವು ಬಿಲ್ಡರ್ಗಳಿಗೆ ಸಾಮಗ್ರಿ ಪೂರೈಸಿದಂತೆ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸುತ್ತಿದ್ದರು ಎಂಬುದು ಗೊತ್ತಾಗಿದೆ.
ಆ ಇನ್ವಾಯ್ಸ್ಗಳನ್ನು ಬಳಸಿಕೊಂಡು ಆರೋಪಿಗಳು ವಾಣಿಜ್ಯ ತೆರಿಗೆ ಇಲಾಖೆಯಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಳ್ಳುತ್ತಿದ್ದರು. ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು, ಬಿಲ್ಡರ್ಗಳಿಗೆ ಐಟಿಸಿಯನ್ನು ವರ್ಗಾಯಿಸಿ ಕಮಿಷನ್ ಸಹ ಪಡೆದುಕೊಂಡಿದ್ದಾರೆ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಇಬ್ಬರ ಜತೆಗೆ ವಂಚನೆಯಲ್ಲಿ ತಮಿಳುನಾಡಿನ ಸೋದರರ ಜೋಡಿಯೊಂದೂ ಭಾಗಿಯಾಗಿತ್ತು. ಟ್ರಯಾನ್ ಟ್ರೇಡರ್ಸ್, ವಂಡರ್ ಟ್ರೇಡರ್ಸ್, ರಾಯಲ್ ಟ್ರೇಡರ್ಸ್ ಮತ್ತು ಗ್ಯಾಲಕ್ಸಿ ಎಂಟರ್ಪ್ರೈಸಸ್ ಎಂಬ ಷೆಲ್ ಕಂಪನಿಗಳನ್ನು ನಡೆಸುತ್ತಿದ್ದ ಇರ್ಬಾಜ್ ಅಹಮದ್ ಮತ್ತು ನಫೀಜ್ ಅಹಮದ್ ಅವರು ರೇವತಿ ಹಾಗೂ ಪ್ರತಾಪ್ ಅವರ ಕಂಪನಿಗಳ ಜತೆಗೆ ಖೊಟ್ಟಿ ವಹಿವಾಟು ನಡೆಸಿದ್ದರು. ಇವರು ಸಹ ಸರಕು ಪೂರೈಸದೇ ನಕಲಿ ಇನ್ವಾಯ್ಸ್ ಸೃಷ್ಟಿಸಿ, ಅಕ್ರಮವಾಗಿ ಐಟಿಸಿ ಪಡೆದುಕೊಂಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಈ ಜಾಲದಲ್ಲಿ ಇನ್ನಷ್ಟು ಮಂದಿ ಮತ್ತು ಹಲವು ಷೆಲ್ ಕಂಪನಿಗಳು ಇದ್ದು ತನಿಖೆ ಮುಂದುವರಿದಿದೆ. ಈ ಜಾಲದಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವರ್ಗಾವಣೆ ಪಡೆದುಕೊಂಡಿದ್ದ ಬಿಲ್ಡರ್ಗಳ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಂಚನೆಯ ಪರಿ
* ಆರೋಪಿಗಳು ಖೊಟ್ಟಿ ವಿಳಾಸ ನೀಡಿ ಬಾಡಿಗೆ ಮತ್ತು ಭೋಗ್ಯ ಕರಾರು ಪತ್ರ ಪಡೆದುಕೊಳ್ಳುತ್ತಿದ್ದರು. ಈ ಪತ್ರಗಳನ್ನು ನೋಂದಣಿ ಮಾಡಿಸುತ್ತಿದ್ದರು
* ಇನ್ಯಾರದೋ ಪ್ಯಾನ್ ಮತ್ತು ಆಧಾರ್ ವಿವರ ಬಳಸಿಕೊಂಡು ಏಕವ್ಯಕ್ತಿ ಮಾಲೀಕತ್ವ ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ ಕಂಪನಿಗಳನ್ನು ಆರಂಭಿಸುತ್ತಿದ್ದರು
* ಬಾಡಿಗೆ ಕರಾರು ಪತ್ರ ಕಂಪನಿ ನೋಂದಣಿ ಪತ್ರ ನೀಡಿ ಜಿಎಸ್ಟಿ ನೋಂದಣಿ ಮಾಡಿಸುತ್ತಿದ್ದರು. ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಲು ಈ ಜಿಎಸ್ಟಿ ನಂಬರ್ಗಳನ್ನೇ ಬಳಸಿಕೊಳ್ಳುತ್ತಿದ್ದರು
* ನಕಲಿ ಇನ್ವಾಯ್ಸ್ ಮತ್ತು ಅಕ್ರಮ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದು ನೋಟಿಸ್ ನೀಡುತ್ತಿದ್ದಂತೆಯೇ ಆ ಕಂಪನಿಗಳ ನೋಂದಣಿಯನ್ನು ಆರೋಪಿಗಳು ರದ್ದುಪಡಿಸುತ್ತಿದ್ದರು. ನಂತರ ಹೊಸ ಕಂಪನಿ ಆರಂಭಿಸುತ್ತಿದ್ದರು. ಇದಕ್ಕಾಗಿ ಆರೋಪಿಗಳು ಹಲವು ಮೊಬೈಲ್ ಇತರ ವ್ಯಕ್ತಿಗಳ ಹೆಸರಿನಲ್ಲಿ ಮೊಬೈಲ್ ಸಿಮ್ಕಾರ್ಡ್ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಕೀಲರ ಹೆಸರಿನಲ್ಲಿ ನಕಲಿ ‘ನೋಟರಿ’ ಮುದ್ರೆಗಳನ್ನು ಬಳಸುತ್ತಿದ್ದರು
* ಕಾರ್ಯಾಚರಣೆ ವೇಳೆ ಹಲವು ಲ್ಯಾಪ್ಟಾಪ್ 24 ಮೊಬೈಲ್ಗಳು 51 ಸಿಮ್ಕಾರ್ಡ್ ಹಲವು ಬ್ಯಾಂಕ್ ಖಾತೆಗಳ ಸ್ಟೇಟ್ಮೆಂಟ್ಗಳನ್ನು ವಶಕ್ಕೆ ಪಡೆಯಲಾಗಿದೆ
ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ’
ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆ ಹೆಸರಿನಲ್ಲಿ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ ಅಕ್ರಮವಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳುವ ಜಾಲ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಇದ್ದ ‘ಕಬ್ಬಿಣ: ಮೂರು ಹಂತದಲ್ಲಿ ಜಿಎಸ್ಟಿ ವಂಚನೆ’ ವರದಿಯು ‘ಪ್ರಜಾವಾಣಿ’ಯ ನವೆಂಬರ್ 30ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.