ADVERTISEMENT

‘ದುಡ್ಡು ಸಾಗಿಸಿದರೂ ಕೇಳುವವರಿಲ್ಲ’: ಬಿಜೆಪಿ ವಿರುದ್ಧ ಎಚ್‌.ಡಿ.ದೇವೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 19:39 IST
Last Updated 27 ನವೆಂಬರ್ 2019, 19:39 IST
 ಎಚ್‌.ಡಿ ದೇವೇಗೌಡ
 ಎಚ್‌.ಡಿ ದೇವೇಗೌಡ   

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದುಡ್ಡಿನಿಂದ ಉಪಚುನಾವಣೆ ನಡೆಸುತ್ತಿದ್ದು, ಎಷ್ಟು ದುಡ್ಡು ಸಾಗಿಸಿದರೂ ಕೇಳುವವರು ಇಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಬುಧವಾರ ಇಲ್ಲಿ ಆರೋಪಿಸಿದರು.

‘ಬಿಜೆಪಿಯವರು ಪ್ರತಿ ಕ್ಷೇತ್ರಕ್ಕೂ ಉಸ್ತುವಾರಿಯನ್ನು ನೇಮಿಸಿಕೊಂಡಿದ್ದಾರೆ. ಅವರು ಫೋನ್‌ ಮಾಡಿ ಬೇಕಾದಷ್ಟು ಹಣ ತರಿಸಿಕೊಳ್ಳಬಹುದು. ಅವರ ಬಳಿ ಅಧಿಕಾರ, ಹಣ ಎರಡೂ ಇದೆ. ದುಡ್ಡು ಎಲ್ಲಿಗೆ ಸಾಗಿಸಿದರೂ ತಡೆಯುವವರು ಇಲ್ಲ’ ಎಂದರು.

‘ಎಷ್ಟು ಹಣ ಬೇಕಾದರೂ ಕೇಳಿ, ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಅನರ್ಹ ಶಾಸಕರಿಗೆ ಸೂಚಿಸಲಾಗಿದೆ. ಹೀಗಾಗಿ 15 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಅನ್ನುತ್ತಿದ್ದಾರೆ. ಇಷ್ಟೆಲ್ಲ ಇರಬೇಕಾದರೆ ನಮಗೆ ಏನು ಮಾಡಲು ಆಗುತ್ತದೆ’ ಎಂದು ಪ್ರಶ್ನಿಸಿದರು.

ADVERTISEMENT

ಕರ್ನಾಟಕದಲ್ಲೂ ಬದಲಾವಣೆ?: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ‘ದೇಶದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿ ಏನು ಬದಲಾವಣೆ ಆಗುತ್ತದೆ ನೋಡೋಣ. ಸೋನಿಯಾ ಗಾಂಧಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು’ ಎನ್ನುವ ಮೂಲಕ ಅವರು ಕುತೂಹಲ ಮೂಡಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ– ಎನ್‌ಸಿಪಿ– ಕಾಂಗ್ರೆಸ್‌ ಸರ್ಕಾರ ಐದು ವರ್ಷ ಆಡಳಿತ ನಡೆಸಿದರೆ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಭವಿಷ್ಯ ನುಡಿದರು.

‘ವಿಶ್ವನಾಥ್ ಸೀಸನ್‌ ರಾಜಕಾರಣಿ’

ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಒಬ್ಬ ‘ಸೀಸನ್‌ ರಾಜಕಾರಣಿ’ ಎಂದು ದೇವೇಗೌಡ ವ್ಯಂಗ್ಯವಾಡಿದರು.

‘ಅವರ ಮನಸ್ಸಿನಲ್ಲಿ ಇರೋದು ಬೇರೆ, ಮಾತನಾಡೋದು ಬೇರೆ. ಅವರು, ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಮತ ಗಳಿ ಸುವುದೇ ಇದರ ಉದ್ದೇಶ. ನಮ್ಮಂತಹ ನಾಯಕರನ್ನು ಟೀಕಿಸಿದರೆ ತೊಂದರೆಯಾಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಆದರೆ ಜನರು ಬುದ್ಧಿವಂತರಾ
ಗಿದ್ದು, ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.