ಬೆಂಗಳೂರು: ಸಮಗ್ರ ಬೆಂಗಳೂರಿನ ಆಡಳಿತ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ಹಾಗೂ ಬಿಬಿಎಂಪಿಯ ವ್ಯಾಪ್ತಿಯನ್ನು ಹಿಗ್ಗಿಸಿ ಏಳು ನಗರ ಪಾಲಿಕೆಗಳನ್ನು ಸೃಜಿಸಲು ಅವಕಾಶ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ–2025’ಕ್ಕೆ ವಿಧಾನಸಭೆಯು ಸೋಮವಾರ ಅಂಗೀಕಾರ ನೀಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇದನ್ನು ತೀವ್ರವಾಗಿ ಟೀಕಿಸಿದ್ದಾರೆ.
ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ!! 75 ವರ್ಷದಿಂದ ಇದನ್ನೇ ಮಾಡಿದೆ, ಮುಂದುವರಿಸಿದೆ. ಕಾಂಗ್ರೆಸ್ ನೀತಿಯೇ Divide and Rule ಎಂದು ಎಕ್ಸ್ ಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ.
ಅಂದು ಅಖಂಡ ಭಾರತವನ್ನು ಹೋಳು ಮಾಡಿತು! ಇಂದು: ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ. ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದು ಇದರ ಹಿಂದಿನ ದುರುದ್ದೇಶವಾಗಿದೆ ಎಂದು ಅವರು ಕಿಡಿಕಾರಿದ್ದಾರೆ..
ಗ್ರೇಟರ್ ಬೆಂಗಳೂರು ಹೆಸರಿಗಷ್ಟೇ. ಅದರ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ..ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ ಎಂದು ಟೀಕಿಸಿದ್ದಾರೆ.
ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.