ಬೆಂಗಳೂರು: ‘ರಾಜಕೀಯದಿಂದ ವಿಶ್ರಾಂತಿ ಪಡೆದಿದ್ದ ಮಾಜಿ ಶಾಸಕರೊಬ್ಬರ ಪುತ್ರ, ಇತರ ಶಾಸಕರ ಕಾರು ತೊಳೆದು ಜೀವನ ನಡೆಸುತ್ತಿದ್ದ ಅಸಹಾಯಕ ಪರಿಸ್ಥಿತಿ ಗಮನಿಸಿ ನೊಂದಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಶಾಸಕರಿಗೆ ಪಿಂಚಣಿ ಸೌಲಭ್ಯ ಜಾರಿಗೆ ತಂದಿದ್ದರು’ ಎಂದು ಬಿಜೆಪಿಯ ಎಚ್. ವಿಶ್ವನಾಥ್ ನೆನಪಿಸಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲೆ ಜೆಡಿಎಸ್ನ ಬೋಜೇಗೌಡ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ‘ಮಧುಗಿರಿಯಿಂದ ಆಯ್ಕೆಯಾಗಿದ್ದ ಶಾಸಕರೊಬ್ಬರ ಇಬ್ಬರು ಮಕ್ಕಳು ಇತರೆ ಶಾಸಕರ ಕಾರು ತೊಳೆದು ಜೀವನ ನಡೆಸುತ್ತಿದ್ದರು. ಪ್ರತಿ ದಿನ ಕಾರು ತೊಳೆಯಲು ₹ 2 ಕೇಳುತ್ತಿದ್ದರು. ಪ್ರತಿದಿನ ಕಾಸು ಕೊಡಬೇಕೇ ಎಂದು ಹುಡುಗನ ಕೆನ್ನೆಗೆ ಬಾರಿಸಿದ್ದೆ’ ಎಂದರು.
ಆಗ ಆ ಹುಡುಗ, ‘ನಾನು ಶಾಸಕರೊಬ್ಬರ ಮಗ, ಕಾರು ತೊಳೆದು ಜೀವನ ನಡೆಸುತ್ತಿದೇನೆ. ನೀವು ಹಣ ನೀಡಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದ್ದ. ಇದರಿಂದ ಮನಸ್ಸಿಗೆ ತೀವ್ರ ನೋವಾಗಿತ್ತು. ಆ ಹುಡುಗನನ್ನು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಬಳಿ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿದ್ದೆ. ಅಲ್ಲದೆ, ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಇದೆ. ಶಾಸಕರಿಗೆ ಇಲ್ಲ ಎಂದು ವಿವರಿಸಿದ್ದೆ’ ಎಂದರು.
ತಕ್ಷಣ ಪ್ರತಿಕ್ರಿಯಿಸಿದ್ದ ದೇವರಾಜ ಅರಸರು, ‘ಶಾಸಕರಿಗೆ ಪಿಂಚಣಿ ಸೌಲಭ್ಯಕ್ಕಾಗಿ ಕರಡು ಕಾಯ್ದೆ ಸಿದ್ದಪಡಿಸಲು ಶಾಸಕರಾಗಿದ್ದ ಜಯಚಂದ್ರ ಅವರಿಗೆ ತಿಳಿಸಿದ್ದರು. ಅಲ್ಲಿಂದ ಪಿಂಚಣಿ ಸೌಲಭ್ಯ ಜಾರಿಯಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.