ಮಡಿಕೇರಿ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಮಧು ಬಂಗಾರಪ್ಪ, ವಿ.ಎಸ್.ವಿ.ದತ್ತ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಆ ಜವಾಬ್ದಾರಿ ವಹಿಸಿದರೆ ನಿಭಾಯಿಸುವ ಶಕ್ತಿ ಹಾಗೂ ಪಕ್ಷ ಸಂಘಟಿಸುವ ಸಾಮರ್ಥ್ಯವಿದೆ’ ಎಂದು ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅಡಗೂರು ಎಚ್.ವಿಶ್ವನಾಥ್ ಬುಧವಾರ ಇಲ್ಲಿ ಹೇಳಿದರು.
‘ನನ್ನ ರಾಜೀನಾಮೆ ಅಂಗೀಕಾರವಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದರು. ನಾನು, ನನ್ನ ರಾಜೀನಾಮೆಯನ್ನೇ ಅಂಗೀಕರಿಸುವಂತೆ ಅವರ ಮನವೊಲಿಸಿದೆ.
‘ಸಮ್ಮಿಶ್ರ’ ಸರ್ಕಾರದ ಮೇಲೆ ನನಗೆ ಪ್ರೀತಿ, ವಿಶ್ವಾಸ, ಅಭಿಮಾನವಿದೆ. ಇನ್ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಹಾಗೂ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುತ್ತೇನೆ’ ಎಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ರಾಜ್ಯದ ರಾಜಕಾರಣ ಕಲುಷಿತವಾಗಿದೆ. ಅದನ್ನು ಶುದ್ಧೀಕರಿಸಬೇಕು. ಸಮಾನ ಮನಸ್ಕರು ಒಂದೆಡೆ ಸೇರಿ ಚರ್ಚಿಸುವ ಅಗತ್ಯವಿದೆ. ಹೋರಾಟ, ಚಳವಳಿ ಆಗಬೇಕು. ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರೂ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ' ಎಂದು ವಿಶ್ವನಾಥ್ ಅವರು ಸೂಚ್ಯವಾಗಿ ಪ್ರತಿಪಾದಿಸಿದರು.
‘ನಮ್ಮದು ಜಾತ್ಯತೀತ ಹಿನ್ನೆಲೆಯುಳ್ಳ ಪಕ್ಷ. ಅದಕ್ಕೆ ಅರ್ಥ ಬರಬೇಕಾದರೆ ಸಚಿವ ಸಂಪುಟದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸ್ಥಾನ ಕಲ್ಪಿಸಬೇಕು. ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕೇಂದ್ರದಲ್ಲೂ ಮೋದಿ ಅವರೂ ಅಲ್ಪಸಂಖ್ಯಾತರಿಗೆ ಸ್ಥಾನ ನೀಡಿದ್ದಾರೆ. ಆದ್ದರಿಂದ, ನಮ್ಮ ಪಾಲಿನ ಎರಡು ಸ್ಥಾನಗಳನ್ನು ದಲಿತ ಹಾಗೂ ಅಲ್ಪಸಂಖ್ಯಾತರಿಗೆ ನೀಡಬೇಕು. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಿಗೆ ಅವಕಾಶ ಸಿಗುವ ವಿಶ್ವಾಸವಿದೆ’ ಎಂದು ಪುನರುಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.