ADVERTISEMENT

ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ: ವಿಶ್ವನಾಥ್

ಹುಣಸೂರಿನಲ್ಲಿ ‘ವಿಶ್ವಾಸಿಗಳ ಚಿಂತನಾ ಸಭೆ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 17:05 IST
Last Updated 19 ಅಕ್ಟೋಬರ್ 2019, 17:05 IST
ಅಡಗೂರು ಎಚ್‌.ವಿಶ್ವನಾಥ್‌
ಅಡಗೂರು ಎಚ್‌.ವಿಶ್ವನಾಥ್‌   

ಹುಣಸೂರು: 'ಸಮ್ಮಿಶ್ರ ಸರ್ಕಾರದ ಪತನಕ್ಕೆ 17 ಶಾಸಕರು ಕಾರಣ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಎರಡೂ ಪಕ್ಷಗಳ ಮುಖಂಡರ ಅಧಿಕಾರದ ಆಸೆಯೇ ಅದಕ್ಕೆ ಮೂಲ ಕಾರಣ’ ಎಂದು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಶನಿವಾರ ಇಲ್ಲಿ ಹೇಳಿದರು.

‘ವಿಶ್ವಾಸಿಗಳ ಚಿಂತನಾ ಸಭೆ’ಯಲ್ಲಿ ಮಾತನಾಡಿದ ಅವರು, ‘40 ವರ್ಷಗಳ ರಾಜಕಾರಣದಲ್ಲಿ ಸಿದ್ದರಾಮಯ್ಯ ನೀಡಿದ ಮಾನಸಿಕ ಹಿಂಸೆಯಿಂದಾಗಿ ಪಕ್ಷದಿಂದ ಹೊರ ಬರಬೇಕಾಯಿತು’ ಎಂದರು.

‘ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದ ರಮೇಶ್ ಕುಮಾರ್ ಅವರ ತೀರ್ಮಾನದಿಂದಾಗಿ ಸರ್ಕಾರ ಉಸಿರುಗಟ್ಟಿ ಶವಪೆಟ್ಟಿಗೆ ಸೇರುವಂತಾಯಿತು. ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಕೇಳುತ್ತಿದ್ದೇವೆ. ನಾವು ಯಾವುದೇ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕನಾಗುವ ಅವಕಾಶ ಕಲ್ಪಿಸಿದ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಚಿರಋಣಿ. ಚುನಾವಣೆ ಬಳಿಕ ಎದುರಾದ ಅಧಿಕಾರದ ಗುದ್ದಾಟದಲ್ಲಿ ನಾನು ಬಲಿಪಶು ಆಗಬೇಕಾಯಿತು. ಸಚಿವ ಸ್ಥಾನ ನೀಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಅದಕ್ಕೆ ಸ್ಪಂದಿಸಿ, ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಿದ್ದೆ. ಆದರೆ, ಕಾಂಗ್ರೆಸ್‌ ಕೈಗೊಂಬೆಯಾಗಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ಪಿತೂರಿಗೆ ನನ್ನನ್ನು ಬಲಿಪಶು ಮಾಡಿದರು’ ಎಂದು ಬೇಸರ ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.