ADVERTISEMENT

21 ಬಗೆಯ ಅಂಗವಿಕಲತೆ ಗುರುತಿಸಲು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 16:37 IST
Last Updated 3 ಡಿಸೆಂಬರ್ 2018, 16:37 IST

ಬೆಂಗಳೂರು: ‘ರಾಜ್ಯದಲ್ಲಿ ಹೊಸ ಸ್ವರೂಪದ ಅಂಗವೈಕಲ್ಯ ಪತ್ತೆಯಾಗುತ್ತಿದ್ದು, ಮುಂದೆ 21 ಬಗೆಯ ಅಂಗವಿಕಲತೆಯನ್ನು ಗುರುತಿಸುವ ಬಗ್ಗೆ ದೇಶದಲ್ಲೇ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಹೇಳಿದರು.

ನಗರದ ಸ್ವತಂತ್ರ ಉದ್ಯಾನದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಸೋಮವಾರ ಮಾತನಾಡಿದ ಅವರು,‘ರಾಜ್ಯದಲ್ಲಿ 13,24,205 ಅಂಗವಿಕಲರು ಇದ್ದಾರೆ. ಇದುವರೆಗೆ ಕೆಲವೇ ಬಗೆಯ ಅಂಗವಿಕಲತೆಯನ್ನು ಗುರುತಿಸಲಾಗುತ್ತಿತ್ತು’ ಎಂದರು.

‘ಬೆನ್ನುಹುರಿ ಪೂರ್ಣ ಹಾನಿಗೊಂಡು ಏಳಲಾಗದ ಪರಿಸ್ಥಿತಿಯಲ್ಲಿರುವವರಿಗೆ ಈಗಾಗಲೇ ಕೊಡುತ್ತಿರುವ ₹5 ಸಾವಿರ ಮಾಸಾಶನ ಹೆಚ್ಚಿಸಬೇಕು. ಗ್ರಾಮೀಣ ಭಾಗದಲ್ಲಿ ಅಂಗವಿಕಲರ ಪುನರ್ವಸತಿಗೆ ಶ್ರಮಿಸುತ್ತಿರುವ ಕಾರ್ಯಕರ್ತರ ಗೌರವಧನ ₹ 7 ಸಾವಿರದಿಂದ 10 ಸಾವಿರಕ್ಕೆ ಏರಿಸಬೇಕು. ಕೆಲವು ಕಾರ್ಯಕರ್ತರು ₹ 3 ಸಾವಿರ ಗೌರವಧನ ಪಡೆಯುತ್ತಿದ್ದಾರೆ. ಆ ಮೊತ್ತವನ್ನು ₹ 5 ಸಾವಿರಕ್ಕೆ ಏರಿಸಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಕೋರಿದರು.

ADVERTISEMENT

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ಅಂಗವಿಕಲರಿಗಾಗಿ ವಸತಿ ಶಾಲೆ ತೆರೆಯುವ ನಿಟ್ಟಿನಲ್ಲಿ ಮುಂದಿನ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು.ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮಾದರಿಯಲ್ಲೇ ಈ ಶಾಲೆಗಳನ್ನು ಸ್ಥಾಪಿಸಲಾಗುವುದು’ ಎಂದರು.

‘ಅಂಗವಿಕಲರ ಕಲ್ಯಾಣ ಸಂಬಂಧಿಸಿ ಸಾಕಷ್ಟು ಮನವಿಗಳು ಬಂದಿವೆ. ಅಂಗವಿಕಲರ ಶಾಲೆಗಳ ಶಿಕ್ಷಕರ ವೇತನ ಏರಿಸಬೇಕು ಎಂಬ ಬೇಡಿಕೆಯೂ ಇದೆ. ಈ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ’ ಎಂದರು.

ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 10 ಸಂಸ್ಥೆಗಳು ನಾಲ್ಕು ಮಂದಿ ಶಿಕ್ಷಕರು ಮತ್ತು 15 ಮಂದಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

**

ಮುಖ್ಯಾಂಶಗಳು

ಅಂಗವಿಕಲರಿಗಾಗಿ ವಸತಿ ಶಾಲೆಗೆ ಬಜೆಟ್‌ನಲ್ಲಿ ಅನುದಾನ

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.