ADVERTISEMENT

ಕೊಡವ ರಿಂಕ್ ಹಾಕಿಯಲ್ಲಿ ಪರದಂಡ ತಂಡ ಚೊಚ್ಚಲ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 15:02 IST
Last Updated 2 ಡಿಸೆಂಬರ್ 2020, 15:02 IST
ಕೊಡವ ರಿಂಕ್ ಹಾಕಿ ಚೊಚ್ಚಲ ಚಾಂಪಿಯನ್ ಪರದಂಡ ತಂಡ
ಕೊಡವ ರಿಂಕ್ ಹಾಕಿ ಚೊಚ್ಚಲ ಚಾಂಪಿಯನ್ ಪರದಂಡ ತಂಡ   

ಪೊನ್ನಂಪೇಟೆ: ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಮತ್ತು ಆಕ್ಸ್ ಸ್ಪೋಟ್ಸ್, ಎಂಟರ್‍ಟೈನ್‍ಮೆಂಟ್ ಸಹಯೋಗದಲ್ಲಿ ನಡೆದ ಕೊಡವ ರಿಂಕ್ ಹಾಕಿಯಲ್ಲಿ ಪರದಂಡ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನೆಲ್ಲಮಕ್ಕಡ ತಂಡ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು. ಕೊಡವ ಫುಟ್‌ಬಾಲ್‌ನಲ್ಲಿ ಬಲ್ಲಚಂಡ ಚಾಂಪಿಯನ್, ಚೌರೀರ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಹಾಕಿ ಅಂತಿಮ ಹಣಾಹಣಿಯಲ್ಲಿ ಪರದಂಡ ತಂಡ ಗೋಲುಗಳ ಮಳೆಗೆರೆಯಿತು. ಆರಂಭದಿಂದಲೇ ಹೋರಾಟ ನಡೆಸಿ 6-2 ಗೋಲುಗಳಿಂದ ಮಣಿಸಿತು. ಪರದಂಡ ಪರ ಮೊಣ್ಣಪ್ಪ 4 ಗೋಲು ಹೊಡೆದು ಮಿಂಚಿದರು. ಇವರಿಗೆ ಅಯ್ಯಪ್ಪ, ಪೂವಣ್ಣ ಒಂದೊಂದು ಗೋಲು ಹೊಡೆದು ಗೆಲುವಿನ ಅಂತರ ಹಿಗ್ಗಿಸಿದರು. ನೆಲ್ಲಮಕ್ಕಡ ಪರ ಪೂವಣ್ಣ 2 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.

ಬೆಸ್ಟ್ ಪ್ರಶಸ್ತಿಗಳು: ಹಾಕಿ ಸರಣಿ ಶ್ರೇಷ್ಠ ಬಹುಮಾನವನ್ನು ನೆಲ್ಲಮಕ್ಕಡ ಪ್ರತಿಕ್ ಪೂವಣ್ಣ ಪಡೆದರು. ಭವಿಷ್ಯದ ಆಟಗಾರನಾಗಿ ಮಂಡೇಟೀರ ಧನುಷ್ ಕಾವೇರಪ್ಪ, ಉತ್ತಮ ಮಹಿಳಾ ಹಾಕಿ ಆಟಗಾರ್ತಿ ಪ್ರಶಸ್ತಿಯನ್ನು ಕಂಬೀರಂಡ ಮಿಲನ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಅಪ್ಪಂಡೇರಂಡ ಸುಬ್ರಮಣಿ, ಉತ್ತಮ ತಂಡ ಪ್ರಶಸ್ತಿಯನ್ನು ಚಂದುರ ಕುಟುಂಬ ಪಡೆದುಕೊಂಡಿತು.

ADVERTISEMENT

ಫುಟ್‌ಬಾಲ್‌: ಫುಟ್‌ಬಾಲ್‌ನಲ್ಲಿ ಬಲ್ಲಚಂಡ ತಂಡವು 1-0 ಗೋಲುಗಳಿಂದ ಚೌರೀರವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು. ಗಣಪತಿ ಏಕೈಕ ಗೋಲು ಹೊಡೆದರು. ಫುಟ್ಬಾಲ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಬಹುಮಾನವನ್ನು ಬಲ್ಲಚಂಡ ಗಣಪತಿ ಪಡೆದುಕೊಂಡರು. ಭವಿಷ್ಯದ ಆಟಗಾರನಾಗಿ ಜಮ್ಮಡ ತಶಿನ್, ಉತ್ತಮ ಮಹಿಳಾ ಆಟಗಾರ್ತಿಯಾಗಿ ಕಾಡ್ಯಮಾಡ ದೀಪ್ತಿ ಹೊರಹೊಮ್ಮಿದರು.

ಪೊನ್ನಂಪೇಟೆ ಕ್ರೀಡಾ ವಸತಿ ಬಾಲಕಿಯರ ತಂಡದಿಂದ ಪ್ರದರ್ಶನ ಹಾಕಿ ಪಂದ್ಯ ನಡೆಯಿತು. ಪೊನ್ನಂಪೇಟೆ ಕೊಡವ ಸಮಾಜ ತಂಡದಿಂದ ಉಮ್ಮತ್ತಾಟ್ ಪ್ರದರ್ಶನಗೊಂಡಿತು.
ಸನ್ಮಾನ: ಪದ್ಮಶ್ರೀ ಪುರಸ್ಕೃತ ಡಾ. ಮೊಳ್ಳೇರ ಪಿ. ಗಣೇಶ್ ಹಾಗೂ ಚೀಫ್ ಎಲೆಕ್ಟ್ರಿಕ್ ಇಂಜಿನಿಯರ್ ತೀತೀರ ಎನ್ ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಮೊಳ್ಳೇರ ಪಿ. ಗಣೇಶ್, ದೇಶದಲ್ಲಿ ಕೊಡವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾಕಿಯಲ್ಲಿ ಬಲಶಾಲಿಯಾಗಿದೆ. ಸಿಖ್ ಜನಾಂಗದ ಆಟಗಾರರಿಗೂ ಸರಿಸಮಾನವಾಗಿ ಆಡುವ ಸಾಮರ್ಥ್ಯ ಕೊಡವರಲ್ಲಿದೆ. ಆದ್ದರಿಂದ ದೇಶಕ್ಕೆ ಮತ್ತಷ್ಟು ಆಟಗಾರರನ್ನು ನೀಡಲು ಮುಂದಾಗಬೇಕಿದೆ ಎಂದರು.

ರಾಷ್ಟ್ರೀಯ ಹಾಕಿ ತಂಡದಲ್ಲಿ ಎಸ್. ವಿ. ಸುನಿಲ್ ಮಾತ್ರ ಇದ್ದಾರೆ. ಇವರು ಒಲಿಂಪಿಕ್ ಆಡುತ್ತಾರೆ ಎಂಬ ಸ್ಪಷ್ಟತೆ ಇಲ್ಲ. ಕೊಡಗಿನ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, ಕೊಡವರಲ್ಲಿ ಒಗ್ಗಟ್ಟು ಮೂಡಲು ಕೊಡವರಲ್ಲಿಯೇ ಗೊಂದಲವಿದೆ. ಕೊಡವ ಸಮಾಜಗಳ ಒಕ್ಕೂಟದ ಪದಾಧಿಕಾರಿಗಳು ಎಲ್ಲಾ ಕೊಡವ ಸಮಾಜಗಳ ಅಭಿಪ್ರಾಯ ಪಡೆದು ಕೊಡವರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು ಸಲಹೆ ನೀಡಿದರು.

ಆಕ್ಸ್ ಸ್ಪೋಟ್ಸ್, ಎಂಟರ್‍ಟೈನ್‍ಮೆಂಟ್ ಸಂಸ್ಥೆ ಸದಸ್ಯರಾದ ಕೊಟ್ಟಂಗಡ ಸೋಮಣ್ಣ, ಅಜ್ಜೇಟೀರ ವಿಕ್ರಂ ಉತ್ತಪ್ಪ, ಮೂಕಳಮಾಡ ಗಣಪತಿ, ನಡಿಕೇರಿಯಂಡ ಬಿಪಿನ್ ಅಪ್ಪಚ್ಚು, ಕನ್ನಂಡ ಅರುಣ್ ನಾಚಪ್ಪ ಇವರುಗಳ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪಪ್ಚೆಟ್ಟೋಳಂಡ ಮನು ಮುತ್ತಪ್ಪ, ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಪಳೆಯಂಡ ರಾಬಿನ್ ದೇವಯ್ಯ, ಮಾಚಿಮಾಡ ರವೀಂದ್ರ ಇದ್ದರು. ಚೆಪ್ಪುಡೀರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿ ನಿರ್ದೇಶಕರಾಗಿ ಬುಟ್ಟಿಯಂಡ ಚೆಂಗಪ್ಪ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.