ADVERTISEMENT

ಸ್ಮಾರಕದ ಕಲ್ಲು ಬೀಳಿಸಿದ ದುಷ್ಟರನ್ನು ಬಂಧಿಸಿ: ಪೊಲೀಸರಿಗೆ ಜನರ ತಾಕೀತು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 10:40 IST
Last Updated 2 ಫೆಬ್ರುವರಿ 2019, 10:40 IST
   

ಹೊಸಪೇಟೆ: ಹಂಪಿ ವಿಷ್ಣು ದೇವಾಲಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಶನಿವಾರ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ದೇಗುಲ ಮಂಟಪದ ಕಲ್ಲುಗಳನ್ನು ಬೀಳಿಸುವ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶನಿವಾರ ‘ಪ್ರಜಾವಾಣಿ’ ಈ ಕುರಿತು ವರದಿ ಪ್ರಕಟಿಸಿತ್ತು. ಅದನ್ನು ನೋಡಿ ಎಸ್ಪಿ‌ ಸ್ಥಳಕ್ಕೆ‌ ಭೇಟಿ‌ ನೀಡಿದರು.

ದುಷ್ಕೃತ್ಯ ಎಸಗಿದವರನ್ನು ಶೀಘ್ರವೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಸ್ಮಾರಕಗಳಿಗೆ ಹಾನಿ ಉಂಟು ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಕಮಲಾಪುರದಲ್ಲಿ ಕೆಲಕಾಲ ರಸ್ತೆ ತಡೆ ಚಳವಳಿ‌ ನಡೆಸಿದರು.

ADVERTISEMENT

ಹಂಪಿ ಕಂಬ ಉರುಳಿಸಿದವರ ವಿರುದ್ಧ ಕಠಿಣ ಕ್ರಮ: ಸಚಿವ ಡಿಕೆಶಿ

ಬೆಂಗಳೂರು:ಹಂಪಿಯಲ್ಲಿ ಐತಿಹಾಸಿಕ ಕೆತ್ತನೆಯುಕ್ತ ಕಲ್ಲು ಕಂಬಗಳನ್ನು ಉರುಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನೂ ಹೊತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಲವು ಕಿಡಿಗೇಡಿಗಳು ಕಂಬಗಳನ್ನು ಉರುಳಿಸಿ ವಿಕೃತಿ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿದ್ದೇನೆ. ಆ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಐತಿಹಾಸಿಕ ಕುರುಹುಗಳನ್ನು ನಾಶ ಮಾಡುವುದನ್ನಾಗಲಿ, ವಿರೂಪಗೊಳಿಸುವುದನ್ನಾಗಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.