ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಮುಂದುವರಿದಿರುವಂತೆಯೇ ಆಕಾಂಕ್ಷಿ ಎಚ್.ಪಿ.ಸ್ವರೂಪ್ ಅವರು ಗುರುವಾರ ಹಾಸನಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.
ಗ್ರಾಮೀಣ ಪ್ರದೇಶದಲ್ಲಷ್ಟೇ ಸಂಚರಿಸುತ್ತಿದ್ದ ಅವರು, ಪಂಚರತ್ನ ಯಾತ್ರೆ ಬರಲಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಚರಿಸುತ್ತಿದ್ದಾರೆ.
ಗುರುವಾರ ಬಸ್ ನಿಲ್ದಾಣ, ಮಾರುಕಟ್ಟೆ, ವಿವಿಧ ಬಡಾವಣೆಗಳಲ್ಲಿ ಮತಯಾಚಿಸಿದರು.
’ಎಲ್ಲಿಯೂ ನನಗೆ ಮತ ಕೊಡಿ ಎನ್ನುತ್ತಿಲ್ಲ. ಬದಲಿಗೆ ಜೆಡಿಎಸ್ಗೆ ಮತ ಕೊಡುವಂತೆ ಕೋರುತ್ತಿದ್ದೇನೆ. ಟಿಕೆಟ್ ಬಗ್ಗೆ ವರಿಷ್ಠರ ತೀರ್ಮಾನಕ್ಕೆ ಬದ್ಧ’ ಎಂದರು.
ಇನ್ನೊಂದೆಡೆ ಭವಾನಿ ರೇವಣ್ಣ ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದು, ನಗರದ ಸಂಸದರ ಕಚೇರಿಯಲ್ಲಿ ನಗರಸಭೆಯ ಜೆಡಿಎಸ್ ಸದಸ್ಯರೊಂದಿಗೆ ಸಭೆ ನಡೆಸಿದರು. ಬಿಜೆಪಿಯಲ್ಲಿದ್ದ ನಗರಸಭೆ ಮಾಜಿ ಸದಸ್ಯ ಬಂಗಾರಿ ಮಂಜು ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಅವರು
ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ನಿಡೂಡಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ ಅವರು, ನಗರದ ವಿಜಯನಗರ ಬಡಾವಣೆಗೆ ಭೇಟಿ ನೀಡಿದ್ದರು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ‘ಟಿಕೆಟ್ ಕುರಿತು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಸ್ವರೂಪ್ ಅವರಿಗೇ ಟಿಕೆಟ್ ಕೊಡುವ ಬಗ್ಗೆ ಮಾಹಿತಿ ಇಲ್ಲ’ ಎಂದರು.
‘ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜೆಡಿಎಸ್ ತೊರೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಶಿವಲಿಂಗೇಗೌಡರೇ ಸ್ಪಷ್ಟಪಡಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.