ನವದೆಹಲಿ: ಮನೆ ಕೆಲಸಕ್ಕೆ ಬಾಲಕಾರ್ಮಿಕರೊಬ್ಬರನ್ನು ಬಳಸಿಕೊಂಡ ದಂಪತಿಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಲು ಒಪ್ಪಿಗೆ ಸೂಚಿಸಿದೆ. ಇದಕ್ಕೆ ಬದಲಾಗಿ ಸಂತ್ರಸ್ತರಿಗೆ ₹1.5 ಲಕ್ಷ ದಂಡ ಹಾಗೂ 100 ಸಸಿಗಳನ್ನು ನೆಡುವಂತೆ ಸೂಚನೆ ನೀಡಿದೆ.
ಪ್ರಕರಣದ ತೀರ್ಪು ನೀಡಿದ ನ್ಯಾಯಮೂರ್ತಿ ನಜ್ಮಿ ವಜಿರಿ, ಮನೆಗೆಲಸಕ್ಕೆ ದಂಪತಿ ಕುಟುಂಬಕ್ಕೆ ಬಾಲಕಾರ್ಮಿಕರನ್ನು ಒದಗಿಸಿದ ಇಬ್ಬರು ಮಧ್ಯವರ್ತಿಗಳಿಗೆ ಸಸಿಗಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿದರು.
‘ಮೂರು ವರ್ಷಕ್ಕಿಂತ ಮೇಲ್ಪಟ್ಟ ಆರು ಅಡಿಗಿಂತಲೂ ಎತ್ತರವಿರುವ ತಲಾ 50 ಸಸಿಗಳನ್ನು10 ದಿನಗಳ ಒಳಗಾಗಿ ನಗರದ ಎರಡು ಪ್ರದೇಶದಲ್ಲಿ ನೆಡಬೇಕು. ದಂಪತಿ ಸಸಿ ನೆಟ್ಟಿರುವ ದಾಖಲೆಯನ್ನು ದಕ್ಷಿಣ ವಿಭಾಗದ ಉಪ ಅರಣ್ಯ ಸಂರಕ್ಷಕರು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನಜ್ಮಿ ಸ್ಪಷ್ಟಪಡಿಸಿದರು.
ಇಲ್ಲಿನ ರಜೌರಿ ಗಾರ್ಡನ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ದಂಪತಿಯ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಗೆಲಸ ಮಾಡುತ್ತಿದ್ದಳು. ತಪ್ಪುಮಾಡಿದ ವೇಳೆ, ಮನೆಯವರು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೇ ವೇತನ ಕೂಡ ನೀಡಿರಲಿಲ್ಲ. ಬಾಲಕಿಯ ತಂದೆಯ ಒಪ್ಪಿಗೆ ಪಡೆದು, ಆಕೆಯನ್ನು ಮಧ್ಯವರ್ತಿಗಳು ಮನೆಕೆಲಸಕ್ಕೆ ಸೇರಿಸಿದ್ದರು.
ಬಾಲಕಾರ್ಮಿಕರನ್ನು ದುಡಿಸಿಕೊಂಡ ಆರೋಪದ ಮೇಲೆ ದಂಪತಿ ವಿರುದ್ಧ ರಜೌರಿ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.