ಬಾಗಲಕೋಟೆ: ಕಾಂಗ್ರೆಸ್, ಜೆಡಿಎಸ್ ಮುಗಿಯಿತು. ಈಗ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇನ್ನು ಯಾವ ಪಕ್ಷ ಸೇರುತ್ತಾರೊ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಉಪಸಭಾಪತಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹೊಂದಾಣಿಕೆ ವಿಚಾರದಲ್ಲಿ ವಿಶ್ವನಾಥ್ ಮಾಡಿರುವ ಟೀಕೆಯ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಕುಮಾರಸ್ವಾಮಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಮೂರು ಪಕ್ಷಗಳು ಮುಗಿಯಿತು. ಇನ್ನೊಂದು ಪಕ್ಷ ಇದ್ದಿದ್ದರೆ ಇಷ್ಟೊತ್ತಿಗೆ ಕರ್ಚೀಫ್ ಇಲ್ಲವೇ ಟವೆಲ್ ಹಾಕಿರುತ್ತಿದ್ದರು. ಕಾದು ನೋಡೋಣ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂದು ಛೇಡಿಸಿದ ಕುಮಾರಸ್ವಾಮಿ, ಸಾಹಿತಿ ಕೋಟಾದಲ್ಲಿ ವಿಧಾನಪರಿಷತ್ ಸದಸ್ಯರಾಗಿರುವ ಅವರು ಸಾಹಿತ್ಯದ ಪರಿಭಾಷೆಯಲ್ಲಿಯೇ ವಿರೋಧಿಗಳನ್ನು ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಅವರ ವಿರುದ್ಧ ಹೆಚ್ಚು ಮಾತಾಡೊಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.