ಹಾಸನ: ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಮತ್ತೆ ಹರಿ ಹಾಯ್ದಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಅವರಂಥವರಿಂದಲೇ ಬಿಜೆಪಿಗೆ ಈ ಗತಿ ಬಂದಿದೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ‘ರೇಣುಕಾಚಾರ್ಯಗೆ ಮಾನ ಮರ್ಯಾದೆ ಇಲ್ಲ. ನಾನು ನನ್ನ ಜೀವನದಲ್ಲಿ ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗಿಲ್ಲ ಎಂದರು ತಿರುಗೇಟು’ ನೀಡಿದರು.
ನನ್ನ ಹಾಗೂ ನಮ್ಮ ಕುಟುಂಬದ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ರೇವಣ್ಣ, ನನಗೆ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗೋ ಅವಶ್ಯತೆ ಬಂದಿಲ್ಲ ಎಂದರು. ದೇವೇಗೌಡರ ಕಾಲದಿಂದಲೂ ನಾನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದ ರೇವಣ್ಣ, ಆಪರೇಷನ್ ಕಮಲ ಆಡಿಯೊ ಬಗ್ಗೆ ಎಸ್ಐಟಿ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.
ಈ ವಿಚಾರದಲ್ಲಿ ಸ್ಪೀಕರ್ ಗೌರವ ಉಳಿಯಬೇಕು. ಈ ಮೂಲಕ ರಾಜ್ಯ-ರಾಷ್ಟ್ರದಲ್ಲಿ ಇತಿಹಾಸ ನಿರ್ಮಾಣ ಆಗಬೇಕು ಎಂದು ಪ್ರತಿಪಾದಿಸಿದರು.
ಆಡಿಯೊ ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಯಡಿಯೂರಪ್ಪ ಪುನರುಚ್ಛಾರ ಮಾಡಿರುವ ಬಗ್ಗೆ, ಅವರೇ ಆಡಿಯೊ ನಂದೇ ಎಂದು ತಪ್ಪೊಪ್ಪಿಕೊಂಡಿದ್ದಾರಲ್ಲಾ ಎಂದು ಮರು ಪ್ರಶ್ನೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.