ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ವೈಭವೀಕರಣಕ್ಕಾಗಿ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿ, 11 ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣರಾದರು. ಜನರು ಸತ್ತಿದ್ದು ಗೊತ್ತಾದರೂ ಟ್ರೋಫಿಗೆ ಮುತ್ತಿಕ್ಕುತ್ತಿದ್ದ ಇಂತಹ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿಯನ್ನು ಸಂಪುಟದಿಂದ ಹೊರಹಾಕಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಪ್ರಚಾರದ ಹೊಣೆ ಹೊತ್ತಿರುವ ಕಂಪನಿ ಬರೆದುಕೊಟ್ಟ ಸ್ಕ್ರಿಪ್ಟ್ನಂತೆ ಉಪ ಮುಖ್ಯಮಂತ್ರಿ ಇಡೀ ದಿನ ಡ್ರಾಮಾ ನಡೆಸಿದರು. ವಿಮಾನ ನಿಲ್ದಾಣ, ವಿಧಾನಸೌಧದ ಮುಂಭಾಗ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವ್ಯಕ್ತಿ ತೋರಿದ ವರ್ತನೆಯನ್ನು ಗಮನಿಸಿದರೆ, ಅವರಿಗೆ ಮಾನವೀಯತೆ ಇಲ್ಲ ಎಂಬುದು ಗೊತ್ತಾಗುತ್ತದೆ’ ಎಂದರು.
‘ಎರಡು ಕಡೆ ಕಾರ್ಯಕ್ರಮ ಮಾಡುವುದು ಬೇಡ ಎಂದು ಗುಪ್ತಚರ ಇಲಾಖೆ, ಪೊಲೀಸರು ಹೇಳಿದ್ದರೂ ಈ ವ್ಯಕ್ತಿ ಒತ್ತಡ ತಂದು ಕಾರ್ಯಕ್ರಮ ನಡೆಸಿದ್ದಾರೆ. ಆರ್ಸಿಬಿ ತಂಡ ಮಂಗಳವಾರ ತಡರಾತ್ರಿ ಗೆಲುವು ಸಾಧಿಸಿತ್ತು. ಅವರಿಗೆ ಮರುದಿನವೇ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯ ಏನಿತ್ತು? ಆ ತಂಡಕ್ಕೆ ಆಹ್ವಾನ ಕೊಟ್ಟವರು ಯಾರು? ಇದೆಲ್ಲದರಲ್ಲಿ ಉಪ ಮುಖ್ಯಮಂತ್ರಿಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.
‘ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡುವ ಉದ್ದೇಶವೇನು? ಇವರಿಂದಲೇ ಆರ್ಸಿಬಿ ಟ್ರೋಫಿ ಗೆದ್ದಿತು ಎಂಬಂತೆ ವರ್ತಿಸಿದರು. ಇವರ ಮಕ್ಕಳು–ಮೊಮ್ಮಕ್ಕಳು, ಆಪ್ತರು, ಹೊಗಳುಭಟರೆಲ್ಲರೂ ವೇದಿಕೆ ಏರಿ ಷೋ ಮಾಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ, ಶಿವಕುಮಾರ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
ಜನ ಸಾಯುತ್ತಿರುವಾಗ ಕಾರ್ಯಕ್ರಮದಲ್ಲಿ ಸಂಭ್ರಮ ಪಡುತ್ತಿದ್ದ ಈ ವ್ಯಕ್ತಿ ಮರುದಿನ ಕಣ್ಣೀರು ಸುರಿಸಿದ್ದಾರೆ. ಸರ್ಕಾರ ಆದೇಶಿಸಿರುವ ತನಿಖೆ ಕಣ್ಣೊರೆಸುವ ತಂತ್ರವಷ್ಟೆಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.