ADVERTISEMENT

ಭಾರಿ ಮಳೆ: ಸಿಡಿಲು ಬಡಿದು ಮಹಿಳೆ ಸಾವು, 8 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’

​ಪ್ರಜಾವಾಣಿ ವಾರ್ತೆ
Published 31 ಮೇ 2020, 2:37 IST
Last Updated 31 ಮೇ 2020, 2:37 IST
ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಧಾರಾಕಾರ ಮಳೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನೀರು ನಿಂತಿತ್ತು
ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಧಾರಾಕಾರ ಮಳೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನೀರು ನಿಂತಿತ್ತು   

ಬೆಂಗಳೂರು: ರಾಯಚೂರು, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಮಳೆಯಾಗಿದೆ. ರಾಯಚೂರು ಮತ್ತು ಮಾನ್ವಿಯಲ್ಲಿ ಶುಕ್ರವಾರ ರಾತ್ರಿ 15 ಮಿ.ಮೀ. ಮಳೆಯಾಗಿದೆ. ಬಾದಾಮಿಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಶನಿವಾರ ಸಂಜೆ ಅಬ್ಬರದ ಮಳೆ ಸುರಿಯಿತು. ಹೊಲದಿಂದ ಮರಳುವಾಗ ಮಹಿಳೆ ಮಕ್ಕಳೊಂದಿಗೆ ಮರದ ಕೆಳಗೆ ನಿಂತಿದ್ದರು. ಶಾಂತವ್ವಅಣ್ಣಪ್ಪ ಭೋವಿ (25) ಸ್ಥಳದಲ್ಲಿಯೇ ಸತ್ತಿದ್ದರೆ, ಇಬ್ಬರು ಮಕ್ಕಳು ಪಾರಾಗಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ಸಂಜೆ ಕೆಲಕಾಲ ಮಳೆ ಸುರಿಯಿತು. ರಾಯಚೂರಿನ ಎಲ್‌ಬಿಎಸ್‌ ನಗರದ ಕಿಶನ್ ಅವರಿಗೆ ಸೇರಿದ ಮನೆ ಕುಸಿದಿದೆ. ತಗ್ಗು ಪ್ರದೇಶಗಳ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ರಾತ್ರಿ ಇಡೀ ಪರದಾಡಿದರು.

ADVERTISEMENT

ಮಾನ್ವಿ ತಾಲ್ಲೂಕಿನ ಕೋಡಗುಡ್ಡ ಹಳ್ಳದ ಸೇತುವೆ ಕೊಚ್ಚಿ ಹೋಗಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವಿವಿಧೆಡೆ ಅಲ್ಪ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಗಂಗನಮಕ್ಕಿ, ಜೆ.ಎಂ. ರಸ್ತೆ, ಛತ್ರಮೈದಾನ ಸೇರಿದಂತೆ ವಿವಿಧೆಡೆಯ ತಗ್ಗು ಪ್ರದೇಶಗಳಲ್ಲಿ ಮನೆ, ಕಟ್ಟಡಗಳಿಗೆ ನೀರು ನುಗ್ಗಿದೆ.

ಬಿದರಹಳ್ಳಿ, ಹಳೆಕೋಟೆ ಸೇರಿ ಹಲವೆಡೆ ಮರಗಳು ಉರುಳಿವೆ.

8 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇದೇ 31 ಮತ್ತು ಜೂನ್ 1ರಂದು ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗಗಳ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗಜಿಲ್ಲೆಗಳಲ್ಲಿ ಜೂ.1ರವರೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಜೂ.2 ರಂದು ಹೆಚ್ಚು ಮಳೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.