ಹೈಕೋರ್ಟ್
ಬೆಂಗಳೂರು: ಉಡುಪಿ ಉದ್ಯಮಿ ರತ್ನಾಕರ ಡಿ.ಶೆಟ್ಟಿ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕುಖ್ಯಾತ ರೌಡಿ ಶೀಟರ್ ಬನ್ನಂಜೆ ರಾಜ ಸಹಚರ ಶಶಿ ಪೂಜಾರಿ ಅಲಿಯಾಸ್ ಶ್ಯಾಡೊ ಅಲಿಯಾಸ್ ಶಶಿಕುಮಾರ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ದೂರು: 2019ರ ಮಾರ್ಚ್ 3ರಂದು ಬನ್ನಂಜೆ ರಾಜ, ಶಶಿ ಪೂಜಾರಿ ಅಲಿಯಾಸ್ ಶ್ಯಾಡೊ ಅಲಿಯಾಸ್ ಶಶಿಕುಮಾರ್, ಧನರಾಜ್ ವಿ.ಕೋಟ್ಯಾನ್ ಅಲಿಯಾಸ್ ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಅಲಿಯಾಸ್ ರಾಕ್, ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ, ಧನರಾಜ್ ಸಾಲಿಯಾನ್ ಅಲಿಯಾಸ್ ಧನು ಕೋಳ, ಉಲ್ಲಾಸ್ ಶೆಣೈ ಅಲಿಯಾಸ್ ಉಲ್ಲಾಸ್ ವಿರುದ್ಧ ರತ್ನಾಕರ ಶೆಟ್ಟಿ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಭಾರತೀಯ ದಂಡ ಸಂಹಿತೆ-1860 ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ-2000ರ (ಕೆಸಿಒಸಿಎ) ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಮೈಸೂರಿನ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
‘ಬನ್ನಂಜೆ ರಾಜ ಸಂಘಟಿತ ಅಪರಾಧ ಸಿಂಡಿಕೇಟ್ನ ಕಿಂಗ್ಪಿನ್ ಆಗಿದ್ದು, ತನ್ನ ಸಹಚರರಾದ ಶಶಿ ಪೂಜಾರಿ, ಧನರಾಜ್ ಕೋಟ್ಯಾನ್, ರವಿಚಂದ್ರ ಪೂಜಾರಿ, ಧನರಾಜ್ ಮತ್ತು ಉಲ್ಲಾಸ್ ಶೆಣೈ ಮೂಲಕ ಶ್ರೀಮಂತ ಉದ್ಯಮಗಳಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾನೆ’ ಎಂದು ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿತ್ತು.
ಶಶಿಕುಮಾರ್ ಈ ಪ್ರಕರಣದಲ್ಲಿ ಜಾಮೀನು ಪಡೆದ ನಾಲ್ಕನೇ ಆರೋಪಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.