ADVERTISEMENT

ಜನಾರ್ದನ ರೆಡ್ಡಿ-ಅಲಿಖಾನ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಆದೇಶ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 7:16 IST
Last Updated 4 ಡಿಸೆಂಬರ್ 2018, 7:16 IST
   

ಬೆಂಗಳೂರು:ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ಈ ಮೊದಲು ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.

‘ನನ್ನ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಪಡಿಸಬೇಕು’ ಎಂದು ಕೋರಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಸಲ್ಲಿಸಿರುವ ರಿಟ್ ಅರ್ಜಿಯನ್ನುನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ದೂರುದಾರರು ಕೋರ್ಟ್ ನೋಟಿಸ್ ಜಾರಿಯಾಗಿಲ್ಲ’ ಎಂಬ ಕಾರಣಕ್ಕೆ ಪ್ರತಿವಾದಿಗಳ ವಿರುದ್ಧ ಪೊಲೀಸರು ಮುಂದಿನ ವಿಚಾರಣೆವರೆಗೂಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬ ಈ ಹಿಂದಿನ ನಿರ್ದೇಶನವನ್ನು ನ್ಯಾಯಪೀಠ ವಿಸ್ತರಿಸಿತು.

ADVERTISEMENT

ಅರ್ಜಿದಾರರ ವಾದವೇನು?:

* ಜನಾರ್ದನ ರೆಡ್ಡಿ, ಅಲಿಖಾನ್ ಮತ್ತು ಈ ಪ್ರಕರಣಕ್ಕೂ ಪರಸ್ಪರ ಸಂಬಂಧವಿಲ್ಲ.

* ಈ ಪ್ರಕರಣದಲ್ಲಿ ಅರ್ಜಿದಾರರು ನೇರವಾಗಿ ಭಾಗಿಯಾಗಿಲ್ಲ.

* ಈ ಅಂಶವನ್ನು ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲೇ ಉಲ್ಲೇಖಿಸಲಾಗಿದೆ.

* ಆಂಬಿಡೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಸಾರ್ವಜನಿಕರಿಗೆ ಜನಾರ್ದನ ರೆಡ್ಡಿ ಹೇಳಿಲ್ಲ ಹಾಗೂ ಸ್ವತಃ ಅವರೂ ಹೂಡಿಕೆ ಮಾಡಿಲ್ಲ.

*ಹೂಡಿಕೆದಾರರ ರಕ್ಷಣಾ ಕಾಯ್ದೆಯು ಅರ್ಜಿದಾರರಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಎಫ್‌ಐಆರ್‌ಗೆ ತಡೆ ನೀಡಬೇಕು.

ಅರ್ಜಿದಾರರ ಪರ ಆರ್.ಪಿ.ಚಂದ್ರಶೇಖರ್ ಹಾಗೂ ಸಿಸಿಬಿ ಪರ ಬ್ಯಾತ ಜಗದೀಶ್ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.