ADVERTISEMENT

ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ಯಾರಾ ಅಥ್ಲೀಟ್‌ಗೆ ಉದ್ಯೋಗ ಬಡ್ತಿ ನೀಡುವಂತೆ ಆದೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2022, 2:59 IST
Last Updated 12 ಮೇ 2022, 2:59 IST
   

ಬೆಂಗಳೂರು: ಅರ್ಜುನ ಪ್ರಶಸ್ತಿ ಪುರಸ್ಕೃತ ಅಂಗವಿಕಲ ಅಥ್ಲೀಟ್ ಆಗಿರುವ ಉದ್ಯೋಗಿಯೊಬ್ಬರಿಗೆ ಬಡ್ತಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ (ಬಿಇಎಲ್) ಹೈಕೋರ್ಟ್ ನಿರ್ದೇಶಿಸಿದೆ.

‘ಪ್ಯಾರಾ ಅಥ್ಲೀಟ್ ವೆಂಕಟರವಣಪ್ಪ ಅವರಿಗೆ ಹಣಕಾಸು ಸೌಲಭ್ಯ ಕಲ್ಪಿಸುವಂತೆ ಕೈಗಾರಿಕಾ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು’ ಎಂದು ಬಿಇಎಲ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುಜಾತ ಮತ್ತು ಶಿವಶಂಕರ ಅಮರಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

‘ವೆಂಕಟರವಣಪ್ಪ ಸೀಮಿತ ಆದಾ ಯದ ಮೂಲ ಹೊಂದಿರುವ ಅಂಗವಿಕಲರಾಗಿದ್ದು, 2022ರಜೂನ್‌ನಲ್ಲಿ ನಿವೃತ್ತರಾಗಲಿದ್ದಾರೆ. ಅವರಿಗೆ ಭವಿಷ್ಯ ದಲ್ಲಿ ಮತ್ತಷ್ಟು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಅವರಿಗೆ ಬಡ್ತಿ, ಹಣಕಾಸು ಸೌಲಭ್ಯ ಸೇರಿದಂತೆ ಉಳಿದ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ವೆಂಕಟರವಣಪ್ಪ ದೈಹಿಕ ಅಂಗವಿಕಲರ ಕೋಟಾದಡಿಯಲ್ಲಿ ಬಿಇಎಲ್‌ನಲ್ಲಿ ಡ್ರಾಫ್ಟ್ಸ್‌ಮನ್ ಡಬ್ಲ್ಯೂಜಿ-3 ಶ್ರೇಣಿಯ ಉದ್ಯೋಗಕ್ಕೆ 1998ರ ಜನವರಿ 1ರಂದು ಸೇರಿದ್ದರು. ಬ್ರಿಸ್ಬೇನ್, ಬ್ಯಾಂಕಾಕ್, ಫ್ರಾನ್ಸ್, ಬುಸಾನ್, ಗ್ರೀಸ್ ಮತ್ತು ಕ್ವಾಲಾಲಂಪುರ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅರ್ಜುನ, ಏಕಲವ್ಯ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.