ADVERTISEMENT

ಅನುಮಾನ ಇದ್ದಾಗ ಶಿಕ್ಷೆ ನೀಡಲಾಗದು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 22:08 IST
Last Updated 24 ಅಕ್ಟೋಬರ್ 2020, 22:08 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬಲವಾದ ಅನುಮಾನ ಇದ್ದಾಗ ನೈತಿಕತೆ ಆಧರಿಸಿ ಶಿಕ್ಷೆ ನೀಡುವುದು ನ್ಯಾಯಲಯದ ಆಯ್ಕೆ ಆಗುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ‌ಮಹಿಳೆಗೆ ಕಿರುಕುಳ ಮತ್ತು ಕೊಲೆ ಆರೋಪದ ಇಬ್ಬರು ಆರೋಪಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ವಿಜಯಪುರ ಜಿಲ್ಲೆಯ ಹೊನ್ನವಾಡದ ನಿವಾಸಿಗಳಾದ ಯಂಕಪ್ಪ ಮತ್ತು ಹನುಮಂತಪ್ಪ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಒಳಗೊಂಡ ಪೀಠ, ‘ಪರಿಪೂರ್ಣ ಸಾಕ್ಷ್ಯ ಇಲ್ಲದೇ ಸಂದೇಹ ಆಧರಿಸಿಯೇ ಸೆಷನ್ಸ್ ನ್ಯಾಯಧೀಶರು ಶಿಕ್ಷೆ ನೀಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿತು.

ಯಂಕಪ್ಪ ಅವರ ಪತ್ನಿ ಲಕ್ಷ್ಮಿ ಅವರಿಗೆ ಯಂಕಪ್ಪ ಮತ್ತು ಸಹೋದರ ಹನುಮಂತಪ್ಪ ಕಿರುಕುಳ ನೀಡಿದ್ದಲ್ಲದೇ 2013ರ ಜುಲೈ 2ರಂದು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದರು ಎಂದು ಪೊಲೀಸರು ದೋಷಾರೋಪ ಸಲ್ಲಿಸಿದ್ದರು. 2014 ಡಿಸೆಂಬರ್‌ 31ರಂದು ನ್ಯಾಯಾಲಯ ಅಪರಾಧಿಗಳು ಎಂದು ಪರಿಗಣಿಸಿ ಶಿಕ್ಷೆ ನೀಡಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಪೀಠ, ‘ಯಾವುದೇ ಸಾಕ್ಷಿಗಳು ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸಿಲ್ಲ ಮತ್ತು ವೈದ್ಯಕೀಯ ಸಾಕ್ಷ್ಯಗಳು ಸಾವಿಗೆ ಕಾರಣವನ್ನು ನಿರ್ಣಾಯಕವಾಗಿ ಸೂಚಿಸಿಲ್ಲ. ಗರ್ಭಿಣಿ ಮಹಿಳೆ ಸಾವು ಎಂಬ ಕಾರಣಕ್ಕೆ ಸೆಷನ್ಸ್‌ ಕೋರ್ಟ್ ನ್ಯಾಯಾಧೀಶರು ವಿಚಲಿತರಾಗಿ ಅನುಕಂಪದಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ’ ಎಂದು ತಿಳಿಸಿತು. ಆರೋಪಿಗಳನ್ನು ಖುಲಾಸೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.