ಧಾರವಾಡ: ‘ಭಾರತದ ಇತರ ಭಾಷೆಗಳಂತೆಯೇ ಹಿಂದಿಯೂ ರಾಷ್ಟ್ರದ ಒಂದು ಭಾಷೆಯೇ ಹೊರತು, ರಾಷ್ಟ್ರಭಾಷೆ ಅಲ್ಲ. ಹಾಗೆಯೇ ಹಿಂದಿ ಅನುಷ್ಠಾನಕ್ಕೆ ಇರುವ ಆಯೋಗದಂತೆಯೇ ಒಕ್ಕೂಟ ವ್ಯವಸ್ಥೆಯ ಎಲ್ಲಾ ಭಾಷೆಗಳಿಗೂ ಇದನ್ನು ವಿಸ್ತರಿಸುವ ಕೆಲಸ ಆಗಬೇಕು’ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ರೈತ, ಕೃಷಿ ಕಾರ್ಮಿಕ ಸಂಘಟನೆಯ ಸಮಾವೇಶದಲ್ಲಿ ಗುರುವಾರ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಒಕ್ಕೂಟ ರಾಷ್ಟ್ರದಲ್ಲಿ ಆಯಾ ಪ್ರದೇಶದ ರಾಜ್ಯ ಭಾಷೆ ಹಾಗೂ ಮಾತೃಭಾಷೆಗಳಿಗೆ ಮಹತ್ವ ಸಿಗಬೇಕು. ಸರ್ವಭಾಷಾ ಸಮಾನತೆಯೇ ಒಕ್ಕೂಟ ಸರ್ಕಾರದ ನೀತಿಯಾಗಬೇಕು. ಯಾವುದೇ ಭಾಷೆ ಅವರ ಇಚ್ಛೆಯಂತೆ ಕಲಿಸಲು ಪ್ರೋತ್ಸಾಹಿಸಲಿ. ಆದರೆ ಅದನ್ನೇ ರಾಷ್ಟ್ರಭಾಷೆ ಎಂದು ಕಲಿಸುವುದು ಖಂಡಿತಾ ತಪ್ಪು. ಅದಕ್ಕೆ ನಮ್ಮ ವಿರೋಧವಿದೆ’ ಎಂದರು.
‘ರಾಜ್ಯದ ಮುಖ್ಯಮಂತ್ರಿಗಳು ಒಂದು ಸಭೆ ನಡೆಸಿ ರಾಷ್ಟ್ರೀಯ ಭಾಷಾ ನೀತಿ ರಚಿಸಲು ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಲು ಇದು ಸಕಾಲ’ ಎಂದು ಡಾ. ಬರಗೂರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.