ಬೆಂಗಳೂರು: ಮನೆಯಿಂದ ಹೊರಗಡೆ ಬಂದ್ರೆ ಕೇಸ್ ಹಾಕ್ತೀವಿ ಎಂಬ ಬೆಂಗಳೂರು ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಹೇಳಿಕೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ತುರ್ತು ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಣೆ ಕೇಳಿದ್ದಾರೆ.
ಕೇಸ್ ಹಾಕೋದಕ್ಕೆ ಅವಕಾಶ ಇದೆಯಾ..? ಏಕೆ ಆ ರೀತಿ ಹೆದರಿಸುವ ಹೇಳಿಕೆ ಕೊಡ್ತಿರಾ..? ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲಿ ಇರೋದೇ ಜನತಾ ಕರ್ಫ್ಯೂ. ಹೀಗೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸಬೇಡಿ ಎಂದು ತಾಕೀತು ಮಾಡಿದರು.
ಎಲ್ಲಾ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮುಂದಿನ ಎರಡು ವಾರ ಜಾಗ್ರತೆ ಎಂದು ಪಿಎಂ ಹೇಳಿದ್ದಾರೆ. ನಾವು ಸಿದ್ಧರಾಗಿರಬೇಕು. ಡಾಕ್ಟರ್ ಮತ್ತು ಪೊಲೀಸ್ರನ್ನು ನಾವು ಮೊದಲು ಸೇಫ್ ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಏಕೆಂದರೆ ಅವರು ಜನರ ಜೊತೆ ನೇರವಾಗಿ ಸಂಪರ್ಕ ಹೊಂದಿರುತ್ತಾರೆ. ಹೀಗಾಗಿ ಪೊಲೀಸರಿಗೆ ಸ್ಯಾನಿಟೈಸರ್, ಮಾಸ್ಕ್ ಅಗತ್ಯವಿದೆ ಎಂದರು.
ನೆರೆ ರಾಜ್ಯಗಳ ಗಡಿಗಳನ್ನು ಬಂದ್ ಮಾಡುವುದಿಲ್ಲ. ಬದಲಿಗೆ ಸ್ಕ್ರಿನಿಂಗ್ ಮಾಡುತ್ತೇವೆ. ಮೂರು ದಿನಗಳ ಬಳಿಕ ಯೋಚಿಸುತ್ತೇವೆ. ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಕೇರಳ, ಆಂದ್ರ ತೆಲಂಗಾಣ, ಮಹರಾಷ್ಟ್ರ ಗಡಿ ಭಾಗಗಳಲ್ಲಿ ನಿಗಾ ಮತ್ತು ಸ್ಕ್ರೀನಿಂಗ್ ಮಾಡಬೇಕು. ಈ ತಿಂಗಳ 31ರ ತನಕ ನೆರೆಯ ರಾಜ್ಯಗಳ ಬಾರ್ಡರ್ ಬಂದ್ ಆಗುತ್ತದೆ.
ಕ್ವಾರಂಟೈನ್ ನಲ್ಲಿದ್ದ ನಾಗರಾಜ್ ಎನ್ನುವ ವ್ಯಕ್ತಿ ಕೊಯಮತ್ತೂರಿಗೆ ಓಡಿ ಹೋಗಿದ್ದ. ಅವನನ್ನು ಪೊಲೀಸರು ಹಿಡಿದು ತಂದಿದ್ದಾರೆ. ಹೋಮ್ ಕ್ವಾರಂಟೈನ್ ಮಾಡಲೇಬೇಕು. ಇಲ್ಲವಾದರೆ ಐಸೋಲೆಷನ್ ವಾರ್ಡ್ಗೆ ಹಾಕ್ತೇವೆ. ಯಾವುದೇ ಬಲವಂತದಿಂದ, ಜನತಾ ಕರ್ಫ್ಯೂ ಇಲ್ಲ. ಯಾವುದೇ ಪ್ರಕರಣ ಹಾಕುವುದಿಲ್ಲ. ಸ್ವಯಂ ಪ್ರೇರಣೆಯಿಂದ ಮಾಡಲು ಮನವಿ ಮಾಡುತ್ತೇವೆ. ಬೆಂಗಳೂರು ಕರಗ ಆಚರಣೆ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ವಾಸ್ತವ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.