ADVERTISEMENT

ಕುಶಾಲನಗರದಲ್ಲೂ ‘ಹುಚ್ಚ’ ವೆಂಕಟ್ ದುಂಡಾವರ್ತನೆ

ತಂಗಿದ್ದ ಲಾಡ್ಜ್‌ ಮಾಲೀಕರ ವಿರುದ್ಧವೇ ಕಿರಿಕ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 13:45 IST
Last Updated 30 ಆಗಸ್ಟ್ 2019, 13:45 IST
ಕುಶಾಲನಗರದಲ್ಲಿ ಕನ್ನಡ ಚಿತ್ರ ನಟ ನಿರ್ದೇಶಕ ಹುಚ್ಚ ವೆಂಕಟ್ ತಮ್ಮ ಸುತ್ತಲು ಸೇರಿದ್ದ ಯುವಕರೊಂದಿಗೆ ಸಿಟ್ಟಿನಲ್ಲಿ ಮಾತನಾಡುತ್ತಿರುವುದು.
ಕುಶಾಲನಗರದಲ್ಲಿ ಕನ್ನಡ ಚಿತ್ರ ನಟ ನಿರ್ದೇಶಕ ಹುಚ್ಚ ವೆಂಕಟ್ ತಮ್ಮ ಸುತ್ತಲು ಸೇರಿದ್ದ ಯುವಕರೊಂದಿಗೆ ಸಿಟ್ಟಿನಲ್ಲಿ ಮಾತನಾಡುತ್ತಿರುವುದು.   

ಕುಶಾಲನಗರ: ಮಡಿಕೇರಿಯಲ್ಲಿ ಗುರುವಾರ ಕಾರು ಜಖಂಗೊಳಿಸಿ ರಂಪಾಟ ನಡೆಸಿ ಸಾರ್ವಜನಿಕರಿಂದ ಗೂಸಾ ತಿಂದಿದ್ದ ನಟ ಹಾಗೂ ನಿರ್ದೇಶಕ ‘ಹುಚ್ಚ’ ವೆಂಕಟ್ ಕುಶಾಲನಗರದಲ್ಲಿಯೂ ಶುಕ್ರವಾರ ದುಂಡಾವರ್ತನೆ ತೋರಿದ್ದಾರೆ.

ಮಡಿಕೇರಿಯಿಂದ ಕುಶಾಲನಗರಕ್ಕೆ ಧಾವಿಸಿದ ವೆಂಕಟ್, ಇಲ್ಲಿನ ಮಹಾರಾಜ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಇದೇ ವೇಳೆ ಲಾಡ್ಜ್ ಕೆಳಭಾಗದಲ್ಲಿದ್ದ ಸಾರ್ವಜನಿಕರು, ಈತನನ್ನು ಕಂಡು ಗುಂಪು ಸೇರಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದ ಯುವಕರ ಜೊತೆಗೆ ‘ಕಿರಿಕ್‌’ ಮಾಡಿಕೊಂಡಿದ್ದಾರೆ.

ರಾಜ್ಯ ಹೆದ್ದಾರಿಯಲ್ಲೂ ಕೆಲಕಾಲ ಅಡ್ಡಾಡಿದ ವೆಂಕಟ್‌, ಆತನನ್ನು ಕಂಡ ಜನರು ಗುಂಪು ಸೇರಲು ಆರಂಭಿಸಿದರು. ಜನರನ್ನು ಕಂಡೊಡನೆ ವೆಂಕಟ್‌ ವರ್ತನೆಯಲ್ಲಿ ಬದಲಾವಣೆ ಕಂಡುಬಂತು.

ADVERTISEMENT

ಅತ್ತ ಲಾಡ್ಜ್‌ನತ್ತಲೂ ಜನರು ಗುಂಪು ಸೇರಲು ಆರಂಭಿಸಿದರು. ಆಗ ಕೊಠಡಿ ಖಾಲಿ ಮಾಡುವಂತೆ ಲಾಡ್ಜ್ ಮಾಲೀಕರು ವೆಂಕಟ್‌ನನ್ನು ಕೋರಿಕೊಂಡರು. ಆಗ ಅವರ ವಿರುದ್ಧವೂ ವೆಂಕಟ್ ಹರಿಹಾಯ್ದಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿದ್ದು ಮಡಿಕೇರಿಯಂತೆ ಕುಶಾಲನಗರದಲ್ಲೂ ಕಿರಿಕ್‌ ಆಗಬಹುದೆಂದು ಲಾಡ್ಜ್‌ ಮಾಲೀಕ ಸಂತೋಷ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರನ್ನು ಚದುರಿಸುತ್ತಿದ್ದಂತೆಯೇ ಅವರ ಮೇಲೂ ವೆಂಕಟ್ ಹರಿಹಾಯಲು ಮುಂದಾದರು. ನಂತರ, ಆತನನ್ನು ಸಮಾಧಾನಪಡಿಸಿ ಲಾಡ್ಜ್‌ನಿಂದ ಹೊರಗೆ ಕಳುಹಿಸಲು ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.