ಅಂಜನಾದ್ರಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಬೆಟ್ಟದ ಸುತ್ತಮುತ್ತಲಿನ ವಾತಾವರಣ ಸಂಪೂರ್ಣ ಕೇಸರಿಮಯವಾಗಿದ್ದು, ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಂದ ಭಕ್ತರುಭಾನುವಾರವೇ ಬಂದಿದ್ದಾರೆ. ಒಂದೂವರೆ ಲಕ್ಷ ಹನುಮ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭಕ್ತರಿಗೆ ಜಿಲ್ಲಾಡಳಿತ ಉಪಾಹಾರ, ಊಟದ ವ್ಯವಸ್ಥೆ ಮಾಡಿದೆ. ಗಂಗಾವತಿ, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಕಡೆಯಿಂದ ಬರುವವರಿಗೆ ಅಲ್ಲಲ್ಲಿ ಊಟ, ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ಹನುಮವ್ರತ ಆಚರಿಸಿದ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಅಂಜನಾದ್ರಿ ಪರ್ವತದತ್ತ, ಜೈ ಶ್ರೀರಾಮ ಎನ್ನುವ ಘೋಷಣೆಯೊಂದಿಗೆ ಭಗವಾದ್ವಜ ಹಿಡಿದು ಕೇಸರಿ ಧಿರಿಸಿನೊಂದಿಗೆ ಬೆಟ್ಟದತ್ತ ಸಾಲುಸಾಲಾಗಿ ಸಾಗಿದರು. ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಬಂದ ಭಕ್ತರು ಬಯಲು ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದು ಕಂಡುಬಂತು.
ಪಾದಯಾತ್ರೆಯ ಮೂಲಕ ಬಂದ ಬಹುತೇಕ ಮಾಲಾಧಾರಿಗಳು ಮಾರ್ಗ ಮಧ್ಯದಲ್ಲಿರುವ ಹನುಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.