ADVERTISEMENT

ಸ್ತ್ರೀಧನದ ಮೇಲೆ ಪತಿಯ ಕುಟುಂಬಕ್ಕೆ ಹಕ್ಕಿಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ‘ವಿವಾಹವಿಚ್ಚೇದನದ ನಂತರ ಪತಿಯ ಕುಟುಂಬದವರು ಪತ್ನಿಯು, ಮದುವೆ ವೇಳೆ ತಂದ ಒಡವೆ, ಹಣ ಸೇರಿದಂತೆ ಯಾವುದೇ ಸ್ತ್ರೀಧನದ ಮೇಲೆ ಹಕ್ಕು ಸ್ಥಾಪಿಸುವಂತಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಕೌಟುಂಬಿಕ ವ್ಯಾಜ್ಯವೊಂದರಲ್ಲಿ, ‘ಪತ್ನಿ ನನ್ನ ವಿರುದ್ಧ ಹೂಡಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಮದುವೆಯನ್ನು ರದ್ದುಗೊಳಿಸುವುದು ಎಂದರೆ ಹೆಂಡತಿಯು ಮದುವೆ ವೇಳೆ ತಂದ ಎಲ್ಲಾ ವಸ್ತುಗಳನ್ನು ಗಂಡನ ಕುಟುಂಬವು ಉಳಿಸಿಕೊಳ್ಳಬಹುದು ಎಂದು ಅರ್ಥವಲ್ಲ. ಮದುವೆ ಮುರಿದು ಬಿದ್ದು ಪತ್ನಿಗೆ ಕಾಯಂ ಜೀವನಾಂಶ ನೀಡುವುದು ಹಾಗೂ ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ತಂದಂತಹ ಹಣ ಹಾಗೂ ಒಡವೆಗಳ ಮೇಲಿನ ಹಕ್ಕು ಮಂಡಿಸುವುದು ಬೇರೆ ಬೇರೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ಅರ್ಜಿದಾರರು ಜೀವನಾಂಶ ನೀಡು ತ್ತಿರುವುದೇನೊ ಸರಿ. ಆದರೆ, ಪತ್ನಿಯ ಕುಟುಂಬದವರು ನೀಡಿದ್ದ ₹ 9 ಲಕ್ಷ ಹಾಗೂ ಒಡವೆಯನ್ನು ಆಕೆಗೆ ವಾಪಸು ನೀಡಬೇಕು. ಅದರ ಮೇಲೆ ಹಕ್ಕು ಮಂಡಿಸಲು ಪತಿಗೆ ಅವಕಾಶವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಪತಿಯ ವಿರುದ್ಧದ ಕೇಸ್ ರದ್ದು ಮಾಡಲು ನಿರಾಕರಿಸಿರುವ ನ್ಯಾಯ ಪೀಠ, ‘ಅರ್ಜಿದಾರರು ಶುದ್ಧಹಸ್ತರೆಂದು ಸಾಬೀತಾಗಬೇಕಾದರೆ ವಿಚಾರಣೆಯನ್ನು ಎದುರಿಸಲೇಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.