ADVERTISEMENT

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 12:47 IST
Last Updated 11 ನವೆಂಬರ್ 2023, 12:47 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಮೈಸೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಸೂಕ್ತ ವ್ಯಕ್ತಿಯನ್ನು ನಮ್ಮ ನಾಯಕರು ನೇಮಿಸುತ್ತಾರೆ. ಬಿಜೆಪಿಯ ಶಾಸಕರೆಲ್ಲರೂ ಆಕಾಂಕ್ಷಿಯಾಗಿದ್ದಾರೆ. ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾ‌ನ ಕೊಡಬೇಕೆಂದೇನಿಲ್ಲ’ ಎಂದರು.

‘ಬಿ.ವೈ. ವಿಜಯೇಂದ್ರ ಯುವಕ. ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಅದರಲ್ಲಿ ಹಿರಿಯರೂ ಇದ್ದರು. ಆದರೆ, ಕಿರಿಯರಿಗೆ ಕೊಡಬಾರದು ಎಂದೇನಿಲ್ಲ. ವಿ.ಸೋಮಣ್ಣ ಪ್ರಭಾವಿ ನಾಯಕರು. ಅವರಿಗೂ ಎಲ್ಲ ರೀತಿಯ ಅರ್ಹತೆ ಇತ್ತು. ಸಿ.ಟಿ. ರವಿ ಅವರಿಗೂ ಪಕ್ಷ ಅನೇಕ ಹುದ್ದೆಗಳನ್ನು ನೀಡಿದೆ. ಒಂದು ಹುದ್ದೆಯನ್ನು ಎಲ್ಲರಿಗೂ ಕೊಡಲಾಗದು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಲೋಕಸಭಾ ಚುನಾವಣೆ ಬಳಿಕ ನಾವೇನು ರಾಜ್ಯ ಸರ್ಕಾರ ಬೀಳಿಸುವುದಿಲ್ಲ. ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಯಿ ಚಾಮುಂಡಿ ಶಕ್ತಿ ನೀಡಲಿ. ಅವರ ಪಕ್ಷದಲ್ಲೇ ಸಾಕಷ್ಟು ಒಡಕುಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ದಂಡೇ ಇದೆ. ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಸಮಾಧಾನಿತರೆಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಉಡೀಸ್ ಮಾಡ್ತಿದ್ದಾರೆ. ಅವರೇ ಆಯ್ಕೆ ಮಾಡಿಕೊಂಡ ಮಂತ್ರಿಗಳು ಅವರ ಮಾತನ್ನೇ ಕೇಳುತ್ತಿಲ್ಲ. ಅಂಥವರನ್ನು ಸಂಪುಟದಿಂದ ಹೊರ ಹಾಕಿದರೆ ಒಳಿತು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.