ಮೈಸೂರು: ‘ಕಷ್ಟಕಾಲದಲ್ಲಿ ನಾನು ನಿಮ್ಮ ಜತೆ ನಿಲ್ಲುತ್ತೇನೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಿ ಎಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಕೇಳಿದ್ದೇನೆ’ ಎಂದು ಕೊಳ್ಳೆಗಾಲದ ಶಾಸಕ ಎನ್.ಮಹೇಶ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಹಿಂದಿನ ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ. ಈಗಲಾದರೂ ಹೆಚ್ಚಿನ ಅನುದಾನ ನೀಡಿದರೆ ಅದನ್ನು ಬಳಸಿಕೊಂಡು ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇನೆ’ ಎಂದು ಅವರು ಇಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನರ್ಹ ಶಾಸಕರು ಹೇಗೆ ಗೆದ್ದು ಬಂದಿದ್ದಾರೆ ಎನ್ನುವುದು ಗೊತ್ತಿದೆ ಎಂದು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಹೇಗೆ ಗೆದ್ದು ಬರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಆ ವಿಚಾರದ ಚರ್ಚೆ ಬೇಡ. ಆದರೆ, ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ’ ಎಂದು ಖಂಡಿಸಿದರು.
ಸಿದ್ದರಾಮಯ್ಯ ಅವರು ಹಿರಿಯರಿದ್ದಾರೆ. ಜನತಾ ನ್ಯಾಯಾಲಯವೇ ಅಂತಿಮ ಎನ್ನುವ ಅಂಶ ಅವರಿಗೂ ತಿಳಿದಿದೆ. ಜನತಾ ನ್ಯಾಯಾಲಯದಲ್ಲೇ ಆಯ್ಕೆಯಾದ ಮೇಲೆ ಮತ್ತೆ ಮತ್ತೆ ಅನರ್ಹರು ಎಂದು ಕರೆಯುವುದು ಸಮಂಜಸ ಅಲ್ಲ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಕಾರಣರಾದವರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಶೇ 75ರಷ್ಟು ವಾಗ್ದಾನ ಈಡೇರಿಸಿದ್ದಾರೆ. ಉಳಿದ ವಾಗ್ದಾನವನ್ನೂ ಅವರು ಈಡೇರಿಸಲಿದ್ದಾರೆ ಎಂದು ಹೇಳಿದರು.
‘ನಾನೀಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಹೀಗೆ ಯಾವುದೇ ಪಕ್ಷದಲ್ಲಿ ಇಲ್ಲ ಸ್ವತಂತ್ರವಾಗಿದ್ದೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.