ಬೆಳಗಾವಿ: ‘ನಮಗೆ ಬಹಳ ತ್ರಾಸಾಗಿದೆ, ಒಂದೆರಡು ದಿನ ವೈನ್ ಶಾಪ್ ಚಾಲೂ ಮಾಡಿಸಿ ಎಂದುಕೊಂಡು ಕೆಲವರು ನನಗೆ ಕರೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದಾದ್ಯಂತ 21 ದಿನ ಲಾಕ್ಡೌನ್ ಘೋಷಿಸಲಾಗಿದೆ. ಈ ದಿನಗಳಲ್ಲಿ ಮದ್ಯ ಕುಡಿಯದೆ ಇದ್ದರೆ ಏನೂ ತೊಂದರೆ ಆಗುವುದಿಲ್ಲ. ಆದರೂ ನನಗೆ 2–3 ಕರೆಗಳು ಬಂದಿವೆ’ ಎಂದರು.
‘ಜನರು ಸಂಯಮ ಇಟ್ಟುಕೊಳ್ಳಬೇಕು. ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ದಿನಪತ್ರಿಕೆಗಳಿಂದ ಕೊರೊನಾ ವೈರಾಣು ಸೋಂಕು ಹರಡುತ್ತದೆ ಎನ್ನುವುದು ಶುದ್ಧ ಸುಳ್ಳು. ಪತ್ರಿಕೆಗಳಿಂದ ಸೋಂಕು ಹರಡುವುದಿಲ್ಲ ಎನ್ನುವುದು ದೃಢಪಟ್ಟಿದೆ. ಹೀಗಾಗಿ, ಜನರು ವದಂತಿಗಳನ್ನು ನಂಬಬಾರದು’ ಎಂದು ಕೋರಿದರು.
‘ಗಡಿಯಲ್ಲಿ ಸರಕು ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.