ಹೊಸಪೇಟೆ: ‘ಕುಲಪತಿ ಹುದ್ದೆಗೆ ನಾನಂತೂ ಅರ್ಜಿ ಹಾಕಿಲ್ಲ. ನಾನು ಆಕಾಂಕ್ಷಿಯೂ ಅಲ್ಲ. ಎರಡನೇ ಅವಧಿಗೆ ಮುಂದುವರಿಯಲು ಸರ್ಕಾರ ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ. ಆದರೆ, ನಾನಾಗಿಯೇ ಕೇಳುವುದಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ತಿಳಿಸಿದ್ದಾರೆ.
‘ಕನ್ನಡ ವಿ.ವಿ.ಯ ಸಿಂಡಿಕೇಟ್ ಸದಸ್ಯರಾಗಿದ್ದ ಸಿದ್ದಲಿಂಗಯ್ಯನವರು ನಾನು ಮಾಡಿರುವ ಕೆಲಸ ನೋಡಿದ್ದಾರೆ. ಹೀಗಾಗಿ ಅವರು ಶೋಧನಾ ಸಮಿತಿಯಲ್ಲಿ ನನ್ನ ಹೆಸರು ಪ್ರಸ್ತಾಪಿಸಿರಬಹುದು’ ಎಂದು ಶುಕ್ರವಾರ ದೂರವಾಣಿಯಲ್ಲಿ ಪತ್ರಿಕೆಗೆ ಹೇಳಿದ್ದಾರೆ.
‘ಇತ್ತೀಚೆಗೆ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ವಿ.ವಿ. ಮೊದಲ ಕುಲಪತಿ ಚಂದ್ರಶೇಖರ ಕಂಬಾರ ಅವರು ನನ್ನ ಕೆಲಸ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಇನ್ನೊಂದು ಅವಧಿಗೆ ನೀವೇ ಇದ್ದರೆ ಒಳ್ಳೆಯದು. ಒಳ್ಳೆಯ ಕೆಲಸಗಳಾಗುತ್ತವೆ ಎಂದೂ ಹೇಳಿದ್ದಾರೆ. ವಿ.ವಿ.ಯ ಕೆಲ ಅಧ್ಯಾಪಕರು ಕಂಬಾರ ಅವರನ್ನು ಭೇಟಿ ಮಾಡಿ, ನನ್ನನ್ನು ಎರಡನೇ ಅವಧಿಗೆ ಮುಂದುವರಿಸುವಂತೆ ಕೋರಿದ್ದಾರೆ. ಆದರೆ, ನನ್ನನ್ನೇ ಮುಂದುವರಿಸಬೇಕೆಂದು ಯಾರಿಗೂ ಕೇಳಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಲ್ಲಿಕಾ ಘಂಟಿ ಅವರು ನಿಗದಿತ ಸಮಯ ಮೀರಿ ಅರ್ಜಿ ಸಲ್ಲಿಸಿರುವುದಕ್ಕೆ ಶೋಧನಾ ಸಮಿತಿಯಲ್ಲಿ ಜಟಾಪಟಿ ನಡೆದು, ಸಭೆ ಮುಂದೂಡಲಾಗಿದೆ ಎಂದು ಜ. 4ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.