ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜಕೀಯದಿಂದ ನಿವೃತ್ತರಾಗುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಲ್ಲಿ ಗುರುವಾರ ಹೇಳಿದರು.
‘ರೈತರ ಬಗ್ಗೆ ಮೋದಿ ಅವರಿಗೆ ಕಿಂಚಿತ್ ಕಾಳಜಿ ಇಲ್ಲ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ ಸಹಾಯ ಮಾಡಲಿಲ್ಲ. ದೇಶಕ್ಕೆ ಅವರ ಕೊಡುಗೆ ಏನು. ರಾಜ್ಯದಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟ 22 ಸ್ಥಾನ ಗೆಲ್ಲುವುದು ಗ್ಯಾರಂಟಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಿಜೆಪಿ ಮುಖಂಡರು ಇಷ್ಟು ದಿನ ರಾಮನ ಜಪ ಮಾಡುತ್ತಿದ್ದರು. ಈಗ ಮೋದಿ ಸೇರಿದಂತೆ ಎಲ್ಲರೂ ಎಚ್.ಡಿ.ದೇವೇಗೌಡರ ಜಪ ಮಾಡುತ್ತಿದ್ದಾರೆ. ಅವರಿಗೆಲ್ಲ ಗೌಡರು ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
‘ಎದುರಾಳಿಗಳು ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ನಾನು ಹಾಗೂ ಕುಮಾರಸ್ವಾಮಿ ಹೊಡೆದಾಡಿಕೊಳ್ಳುವುದಿಲ್ಲ. ಅವರು ತಿರುಕನ ಕನಸು ಕಾಣುತ್ತಿರಲಿ’ ಎಂದರು.
‘ಕೆಲ ಕಳ್ಳರು ಇದ್ದಾರೆ. ಅವರನ್ನು ಎದುರಿಸಲು ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಳ್ಳಬೇಕಾಗುತ್ತದೆ. ಅದು ಪರಿಣಾಮ ಕೂಡ ಬೀರಿದೆ. ಬೇಕಾದರೆ ಯಡಿಯೂರಪ್ಪ, ಅಶೋಕ ಅವರಿಗೂ ಒಂದೊಂದು ನಿಂಬೆಹಣ್ಣು ಕೊಡುತ್ತೇನೆ. ಆಗ ಅವರಿಗೆ ಮಾಟ–ಮಂತ್ರ ತಟ್ಟುವುದಿಲ್ಲ. ಈಶ್ವರಪ್ಪ ಅವರನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ನುಡಿದರು.
‘ನಮಗೆ 22, 18, 6, 8 ಲಕ್ಕಿ ಸಂಖ್ಯೆ. ನಾವೇ ಅಧಿಕಾರಕ್ಕೆ ಬರೋದು ನೋಡಿ. 2018ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು’ ಎಂದರು.
ರೇವಣ್ಣ ನಿವೃತ್ತಿಗೆ ತಯಾರಾಗಲಿ:
ಹುಬ್ಬಳ್ಳಿ: ‘ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ಖಚಿತ. ಸಚಿವ ಎಚ್.ಡಿ. ರೇವಣ್ಣ ರಾಜಕೀಯ ನಿವೃತ್ತಿಗೆ ಸಿದ್ಧರಾಗಲಿ’ ಎಂದು ಯಡಿಯೂರಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.