ADVERTISEMENT

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಪ್ರಭಾವ ಗೊತ್ತಾಗಲಿದೆ: HC ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳಿಗೆ ಮತ ಹಾಕಿ ಎಂಬ ಮನವಿಯಷ್ಟೇ ನಮ್ಮದು ಎಂದ ಮಾಗಡಿ ಕಾಂಗ್ರೆಸ್ ಶಾಸಕ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 13:35 IST
Last Updated 31 ಜನವರಿ 2024, 13:35 IST
<div class="paragraphs"><p>ಮಾಗಡಿ  ಶಾಸಕ ಎಚ್‌.ಸಿ. ಬಾಲಕೃಷ್ಣ</p></div>

ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ

   

ಮಾಗಡಿ (ರಾಮನಗರ): ‘ಬಿಜೆಪಿಯವರ ಮಂತ್ರಾಕ್ಷತೆ ಬದಲು ಕಾಂಗ್ರೆಸ್‌ನ ಗ್ಯಾರಂಟಿಗೆ ಜನ ಮತ ಹಾಕಬೇಕು ಎಂಬುದು ನನ್ನ ಮನವಿಯಷ್ಟೇ. ಒಂದು ವೇಳೆ ಹಾಕದಿದ್ದರೆ ಗ್ಯಾರಂಟಿ ಕೊಟ್ಟು ಏನೂ ಪ್ರಯೋಜನವಾಗಿಲ್ಲ, ಅದನ್ನು ರದ್ದುಗೊಳಿಸುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನ ಮತ ಹಾಕಲೇಬೇಕು. ಇಲ್ಲದಿದ್ದರೆ ಗ್ಯಾರಂಟಿ ರದ್ದು ಮಾಡುತ್ತೇವೆಂದು ನಾನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ನಮಗೇ ಯಾಕೆ ಮತ ಹಾಕಬೇಕೆಂಬ ವಾಸ್ತವಾಂಶವನ್ನು ಜನರ ಮುಂದಿಡುತ್ತಿದ್ದೇನೆ. ರಾಜ್ಯದ ಜನತೆಗೆ ಇದು ಗೊತ್ತಾಗಲಿ ಎಂದು ಆ ರೀತಿ ಹೇಳಿದ್ದೇನೆ’ ಎಂದರು.

ADVERTISEMENT

‘ಹಿಂದೆ ಬಿಜೆಪಿಯವರು ಕಪ್ಪುಹಣ ವಾಪಸ್ ತಂದು ಎಲ್ಲರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದಿದ್ದರು. ಯಾರಿಗಾದರೂ ಹಾಕಿದ್ದಾರೆಯೇ. ಅವರು ಹೇಳಿಯೂ ಮಾಡಲಿಲ್ಲ. ಆದರೆ, ನಾವು ಹೇಳಿದಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇವುಗಳ ಪ್ರಯೋಜನ ಪಡೆದಿರುವ ಜನ ಚುನಾವಣೆಯಲ್ಲಿ ಶಕ್ತಿ ತುಂಬಿದರೆ ನಮಗೆ ಸ್ಪೂರ್ತಿ ಬರುತ್ತದೆ. ಮತ್ತಷ್ಟು ಅಭಿವದ್ಧಿ ಕೆಲಸಗಳನ್ನು ಮಾಡುತ್ತೇವೆ’ ಎಂದು ತಿಳಿಸಿದರು.

‘ರಾಜ್ಯದ ಜನ ಮಂತ್ರಾಕ್ಷತೆಗೆ ಮತ ಹಾಕಿದ್ದಾರೊ ಅಥವಾ ಗ್ಯಾರಂಟಿಗೆ ಹಾಕಿದ್ದಾರೊ ಎಂಬುದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಾಗ ಗೊತ್ತಾಗಲಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಗುತ್ತಿದ್ದಂತೆ, ಭಯಗೊಂಡ ಬಿಜೆಪಿಯವರು ಅಪೂರ್ಣ ರಾಮಮಂದಿರವನ್ನು ಉದ್ಘಾಟನೆ ಮಾಡಿದ್ದಾರೆ. ನಾವು ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.