ಬೆಂಗಳೂರು: ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಸರ್ವಾಂಗೀಣ ಅಭಿವೃದ್ಧಿ ಕುರಿತು ಐಎಎಸ್ ಅಧಿಕಾರಿ ಗುರುಚರಣ್ ಅಧ್ಯಕ್ಷತೆಯ ಏಕಸದಸ್ಯ ಸಮಿತಿ ಮುಖ್ಯಮಂತ್ರಿಯವರಿಗೆ ಸೋಮವಾರ ವರದಿ ಸಲ್ಲಿಸಿದ್ದು, ಕಾರ್ಪೊರೇಟ್ ಮಾದರಿಯ ಆಡಳಿತ ಮತ್ತು ವೃತ್ತಿಪರತೆ ತರಲು ‘ರಾಜ್ಯ ಇಂಧನ ಯೋಜನಾ ಮಂಡಳಿ’ ಮತ್ತು ‘ಇಂಧನ ನಿರ್ದೇಶನಾಲಯ’ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ.
ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎಸ್ಎಲ್ಡಿಸಿ) ಬಲಪಡಿಸಲು ಮತ್ತು ಹಣವನ್ನು ಉದ್ದೇಶಿತ ಕಾರ್ಯಕ್ರಮಗಳಿಗೇ ಬಳಸುವುದನ್ನು ಖಾತರಿ ಪಡಿಸಲು ‘ಹೋಲ್ಡಿಂಗ್ ಕಂಪನಿ’ ರಚಿಸಬೇಕು. ಎಲ್ಲ ಎಸ್ಕಾಂಗಳಲ್ಲಿ ‘ಬಿಜಿನೆಸ್ ಪ್ಲಾನಿಂಗ್ ಯೂನಿಟ್’ಗಳನ್ನೂ ಸ್ಥಾಪಿಸಬೇಕು ಎಂದು ವರದಿಯಲ್ಲಿ ಹೇಳಿದೆ.
ವಿದ್ಯುತ್ ದರವನ್ನು ತರ್ಕಬದ್ಧವಾಗಿ ನಿರ್ಧರಿಸಲು ಯೋಜನೆ ರೂಪಿಸಬೇಕು. ವಿದ್ಯುತ್ ತೆರಿಗೆ, ಓಎ(ಓಪನ್ ಆಕ್ಸೆಸ್) ಬಳಕೆ, ಕ್ಯಾಪ್ಟಿವ್ ಬಳಕೆಯ ಮೇಲೆ ತೆರಿಗೆ ಹೆಚ್ಚಿಸುವುದಕ್ಕಾಗಿ ‘ರೆಗ್ಯುಲೇಟರಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ ಸ್ಥಾಪಿಸಬೇಕು, ಐಟಿ ಸೆಟ್ಗಳಿಗೆ ಮೀಟರ್ಗಳನ್ನು ಅಳವಡಿಸಬೇಕು ಎಂದೂ ಶಿಫಾರಸು ಮಾಡಿದೆ.
ವಿದ್ಯುತ್ ಕಂಪನಿಗಳು ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಮೂಲ ಹಣಕಾಸಿನ ಸ್ವಾವಲಂಬನೆ ಸಾಧಿಸಲು ಸಲಹೆ ನೀಡಿದೆ. ವಿದ್ಯುತ್ ದರದ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವುದರಿಂದ ₹750 ಕೋಟಿ, ಆಡಳಿತಾತ್ಮಕ ಕ್ರಮಗಳಿಂದ ₹4,500 ಕೋಟಿ, ಕ್ಷಮತೆಯ ಕ್ರಮಗಳಿಂದ ₹400 ಕೋಟಿ, ಹೊಸ ಬಗೆಯ ಕ್ರಮಗಳಿಂದ ₹974 ಕೋಟಿ, ಈ ರೀತಿ ಒಟ್ಟು ₹6,624 ಕೋಟಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಸಾಧ್ಯವೆಂದು ಹೇಳಿದೆ.
ಎಚ್ಟಿ ಬಳಕೆಗಾರರಿಗೆ 1000 ಮೆ.ವ್ಯಾ ವರೆಗಿನ ವಿದ್ಯುತ್ ಅನ್ನು ಯುನಿಟ್ಗೆ ₹5 ರಂತೆ (ರಿಯಾಯ್ತಿ ದರದಲ್ಲಿ) ಮಾರಾಟ ಮಾಡಬಹುದು, ಗೃಹ ಬಳಕೆಯ ಗ್ರಾಹಕರಿಗೆ ನೀಡುವ ಸಬ್ಸಿಡಿಯನ್ನು ಶೇ 40 ರಷ್ಟು ಇಳಿಕೆ ಮಾಡಬಹುದು, ನೀರು ಪೂರೈಕೆ ಮತ್ತು ಇತರ ಎಚ್ಟಿ ಬಳಕೆದಾರರಿಗೆ ನೀಡುತ್ತಿರುವ ಸಬ್ಸಿಡಿಯಲ್ಲಿ ಶೇ 50 ರಷ್ಟು ಕಡಿಮೆ ಮಾಡಬಹುದು. ಎಲ್ಟಿ ಕಮರ್ಷಿಯಲ್ ಶೇ 34 ರಿಂದ ಶೇ 30, ಎಚ್ಟಿ ಇಂಡಸ್ಟ್ರಿಯಲ್ ಗ್ರಾಹಕರಿಗೆ ಶೇ 26 ರಿಂದ ಶೇ 23 ಮತ್ತು ಎಚ್ಟಿ ಕಮರ್ಷಿಯಲ್ ಶೇ 71 ರಿಂದ ಶೇ 50 ಕ್ಕೆ ಇಳಿಸಬೇಕು ಎಂದೂ ಶಿಫಾರಸು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.