ADVERTISEMENT

ಟೂಲ್‌ಕಿಟ್‌ ವಿಫಲವಾದಾಗ ತೇಜೋವಧೆಯೊಂದೇ ಕಾಂಗ್ರೆಸ್‌ನ ಕೊನೆಯ ಅಸ್ತ್ರ: ಬಿಜೆಪಿ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 10:25 IST
Last Updated 21 ಫೆಬ್ರುವರಿ 2023, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಟೂಲ್‌ಕಿಟ್‌ಗಳು ವಿಫಲವಾದಾಗ ತೇಜೋವಧೆಯೊಂದೇ ಕಾಂಗ್ರೆಸ್‌ನ ಕೊನೆಯ ಅಸ್ತ್ರ ಎಂದು ಬಿಜೆಪಿ ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ಸಿಗರು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಮಾತನ್ನು ಕಾಂಗ್ರೆಸ್ ಪದೇ ಪದೇ ಸಾಬೀತು ಪಡಿಸಲು ಹೊರಟಿದೆ. ಬಡ ಕುಟುಂಬದಲ್ಲಿ ಹುಟ್ಟಿ ಚಾಯ್ ವಾಲಾ ಆಗಿ ದೇಶದ ಚುಕ್ಕಾಣಿ ಹಿಡಿದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಚುನಾವಣೆಯಲ್ಲಿ ಎದುರಿಸಲಾಗದ ಹೇಡಿಗಳು ತೇಜೋವಧೆಗೆ ಇಳಿದಿದ್ದಾರೆ’ ಎದು ವಾಗ್ದಾಳಿ ನಡೆಸಿದೆ.

‘ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆದಾಗಲೇ ಮುಂದೊಂದು ದಿನ ದೇಶದ ಚುಕ್ಕಾಣಿ ಹಿಡಿಯುವ ಸೂಚನೆ ಕಾಂಗ್ರೆಸ್‌ಗೆ ಸಿಕ್ಕಿತ್ತು. ಆಗಲೇ ಮೋದಿಯವರನ್ನು ಮಟ್ಟ ಹಾಕಲು ವಿರೋಧಿಗಳು ಷಡ್ಯಂತ್ರ ಹೆಣೆದಿದ್ದರು. ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿ ಈ ಸಂಸ್ಕೃತಿಗೆ ಅಂದೇ ನಾಂದಿ ಹಾಡಿದ್ದರು ಎಂದು ಬಿಜೆಪಿ ಗುಡುಗಿದೆ.

ADVERTISEMENT

‘ಬ್ರಿಟಿಷರಿಂದ ನೇರವಾಗಿ ಅಧಿಕಾರ ಹಿಡಿದ ಕಾಂಗ್ರೆಸ್ ತನ್ನ ಪರಕೀಯ ಮೂಲವನ್ನು ಇಂದಿಗೂ ಉಳಿಸಿಕೊಂಡಿದೆ. ಸುದೀರ್ಘ ಅಧಿಕಾರ ಹಿಡಿಯಲು ಮತ್ತು ಜನರನ್ನು ವಂಚಿಸಲು ಇಂದಿನ ನಕಲಿ ಗಾಂಧಿ ಕುಟುಂಬ ಬಳಸಿಕೊಂಡಿದ್ದು ಮಹಾತ್ಮ ಗಾಂಧಿಯ ಹೆಸರನ್ನು. ಕಾಂಗ್ರೆಸ್‌ ವಿಸರ್ಜಿಸಿ ಎಂದ ಮಹಾತ್ಮರ ಹೆಸರು ಇಟ್ಟುಕೊಂಡು ಕೈ ಪಕ್ಷ ದೇಶಕ್ಕೆ ದ್ರೋಹ ಬಗೆದಿದೆ’ ಎಂದು ಬಿಜೆಪಿ ಕಟುಕಿದೆ.

‘ಗಾಂಧಿ ಹೆಸರು ಇಟ್ಟುಕೊಂಡ ನಿಯೋ ಗಾಂಧಿಗಳ 'ಘಂಡಿ' ಇತಿಹಾಸವೇ ರೋಚಕ. ಇಂದಿರಾ ಪ್ರಿಯದರ್ಶಿನಿ ನೆಹರು ಇಂದಿರಾ ಗಾಂಧಿಯಾದರು. ‍‍ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ ಸೋನಿಯಾ ಗಾಂಧಿಯಾದರು. ಪ್ರಿಯಾಂಕಾ ವಾದ್ರಾ ಆಗಬೇಕಿದ್ದ ಪ್ರಿಯಾಂಕಾ ಗಾಂಧಿ ಆಗಿಯೇ ಉಳಿದರು. ನಕಲಿ ಗಾಂಧಿಗಳು ಹೆಸರು ಬದಲಾಯಿಸಿದರು. ದೇಶದ ಜನ ಇವರನ್ನೇ ಬದಲಾಯಿಸಿದರು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ದೇಶದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುವುದನ್ನೇ ಸಹಿಸಿಕೊಳ್ಳದ ಕಾಂಗ್ರೆಸ್ ಬಡತನದಲ್ಲಿ ಬೆಳೆದು ಪ್ರಧಾನಿಯಾಗಿರುವ ಮೋದಿಯವರನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ? ಕಾಂಗ್ರೆಸ್ ಟೂಲ್‌ಕಿಟ್‌ಗಳು ವಿಫಲವಾದಾಗ ತೇಜೋವಧೆಯೊಂದೇ ಕಾಂಗ್ರೆಸ್ಸಿಗೆ ಉಳಿದುಕೊಂಡಿರುವ ಕೊನೆಯ ಅಸ್ತ್ರ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.