ADVERTISEMENT

ರಸ್ತೆ, ಸೇತುವೆಗಳಿಗಿರುವ ಬಿಜೆಪಿ ನಾಯಕರ ಹೆಸರು ಬದಲಿಸಬೇಕಾಗುತ್ತದೆ: ಕಾಂಗ್ರೆಸ್

ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದರೆ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 11:06 IST
Last Updated 10 ಆಗಸ್ಟ್ 2021, 11:06 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ    

ಬೆಂಗಳೂರು: ‘ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದರೆ, ಹಲವು ರಸ್ತೆ, ಸೇತುವೆಗಳಿಗಿರುವ ಬಿಜೆಪಿ ನಾಯಕರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬದಲಿಸಬೇಕಾಗುತ್ತದೆ’ ಎಂದು ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯವರು ದ್ವೇಷದ ರಾಜಕಾರಣ ಬಿಟ್ಟು ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳಬೇಕು. ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಎಂದಿಗೂ ಈ ರೀತಿಯ ರಾಜಕಾರಣ ಮಾಡಿಲ್ಲ’ ಎಂದು ಅಸಮಾದಾನ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ರಿಯಾಯಿತಿ ದರದಲ್ಲಿ ಊಟ ನೀಡುವ ಕ್ಯಾಂಟೀನ್ ಆರಂಭಿಸಿ, ಅದಕ್ಕೆ ಇಂದಿರಾ ಗಾಂಧಿ ಹೆಸರನ್ನು ನಾಮಕರಣ ಮಾಡಿತ್ತು. ಈಗ ಅದಕ್ಕೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬಿಜೆಪಿ ಮರುನಾಮಕರಣ ಮಾಡಲು ಚರ್ಚೆ ಆರಂಭಿಸಿದೆ. ಬಿಜೆಪಿ ಸರ್ಕಾರ ಹೊಸದಾಗಿ ಮತ್ತೊಂದು ಯೋಜನೆ ಆರಂಭಿಸಿ. ಅದಕ್ಕೆ ಅನ್ನಪೂರ್ಣೇಶ್ವರಿ ಹೆಸರಿಸಲಿ. ಅದನ್ನು ಬಿಟ್ಟು, ಹೊಸದಾಗಿ ಏನನ್ನೂ ಮಾಡದೆ ಹಿಂದಿನ ಸರ್ಕಾರಗಳು ಜಾರಿಗೆ ತಂದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಮರು ನಾಮಕರಣ ಮಾಡುವುದನ್ನೇ ಸಾಧನೆ ಎಂದು ಭಾವಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಅಟಲ್ ಸಾರಿಗೆ, ಯಲಹಂಕ ಮೇಲ್ಸೇತುವೆಗೆ ಸಾರ್ವಕರ್, ಯಶವಂತಪುರದ ಮೇಲ್ಸೇತುವೆಗೆ ದೀನ್ ದಯಾಳ್ ಉಪಾಧ್ಯಾಯ ಹೆಸರು ಇಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾವು ಕೂಡ ಮರು ನಾಮಕರಣ ಮಾಡಬೇಕಾಗುತ್ತದೆ. ಕೂಡಲೇ ಹೆಸರು ಬದಲಾವಣೆ ಷಡ್ಯಂತ್ರವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ಜನಪರವಾಗಿ ಯಾವುದಾದರೂ ಯೋಜನೆ ಜಾರಿಗೆ ತರಲಿ. ಪ್ರಸ್ತುತ ದುಬಾರಿ ತೆರಿಗೆ, ಬೆಲೆ ಏರಿಕೆ ಸೇರಿದಂತೆ ಅನೇಕ ಜನ ವಿರೋಧಿ ಕ್ರಮಗಳಲ್ಲೇ ಕಾಲ ಕಳೆಯುತ್ತಿರುವ ಬಿಜೆಪಿಯವರು ಮರುನಾಮಕರಣದ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದ ಅವರು, ‘ಖೇಲ್‍ರತ್ನ ಪ್ರಶಸ್ತಿಗೆ ರಾಜೀವ್ ಗಾಂಧಿ ಅವರ ಹೆಸರು ತೆಗೆದು ಮೇಜರ್ ಧ್ಯಾನ್‍ಚಂದ್ ಹೆಸರು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರ ಧ್ಯಾನ್‍ಚಂದ್ ಹೆಸರಿನಲ್ಲಿ ಖೇಲ್‍ರತ್ನಗಿಂತಲೂ ದೊಡ್ಡ ಪ್ರಶಸ್ತಿ ಸ್ಥಾಪಿಸಬಹುದಿತ್ತು. ಅದನ್ನು ಬಿಟ್ಟು ಹೆಸರು ಬದಲಿಸಿರುವುದು’ ಖಂಡನೀಯ ಎಂದು ಕಿಡಿಕಾರಿದರು.

‘ಗುಜರಾತ್‍ನ ಅಹಮದಾಬಾದ್‍ನ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರು ತೆಗೆದು ನರೇಂದ್ರ ಮೋದಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ದೆಹಲಿಯ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು ಇಡಲಾಗಿದೆ. ಇವರೇನು ಕ್ರಿಕೆಟ್ ಆಟಗಾರರೇ. ಮೋದಿಯವರು ಎಷ್ಟು ಸೆಂಚುರಿ ಹೊಡೆದಿದ್ದಾರೆ. 500 ವಿಕೆಟ್ ತೆಗೆದು, 300 ಕ್ಯಾಚ್ ಹಿಡಿದಿದ್ದಾರೆಯೇ. ಕ್ರಿಕೆಟ್ ಕ್ರೀಡಾಂಗಣಕ್ಕೆ ಮೋದಿ ಹೆಸರು ಏಕೆ ಇಡಬೇಕಿತ್ತು’ ಎಂದು ಅವರು ಪ್ರಶ್ನಿಸಿದರು.

ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯಬಿ.ಕೆ. ಹರಿಪ್ರಸಾದ್ ಮತ್ತು ವಿಧಾನಪರಿಷತ್‌ ಮುಖ್ಯಸಚೇತಕ ಎಂ. ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.