ADVERTISEMENT

ಲಿಂಗಾಯತ ಧರ್ಮ ಹೋರಾಟದ ಪರೋಕ್ಷ ಪ್ರತಿಪಾದನೆ: ವಿ. ಸೋಮಣ್ಣ ಮಾತಿಗೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 7:51 IST
Last Updated 16 ಫೆಬ್ರುವರಿ 2020, 7:51 IST
ಪ್ರಮಥ ಗಣಮೇಳದಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಪ್ರಮಥ ಗಣಮೇಳದಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ನೆರವೇರಿಸಿದರು.   
""

ಬೆಂಗಳೂರು: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಇಲ್ಲಿನ ಬಿಐಇಸಿ ನಂದಿ ಗ್ರೌಂಡ್ಸ್‌ನಲ್ಲಿ ಭಾನುವಾರ (ಫೆ.16)ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಸಮ್ಮೇಳನದ ಧ್ಯೇಯವಾಕ್ಯವೂ ಆಗಿದ್ದ, ‘ಜಾಗತಿಕ ಶಾಂತಿ ಪ್ರಗತಿ’ಗೋಷ್ಠಿಯಲ್ಲಿ ಪರೋಕ್ಷವಾಗಿ ಲಿಂಗಾಯತ ಧರ್ಮ ಹೋರಾಟದ ಪ್ರತಿಪಾದನೆ ಮಾಡಿದ ಸಚಿವ ವಿ. ಸೋಮಣ್ಣ ಅವರ ಮಾತಿಗೆ ಸಭಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.

‘ರಾಜಕಾರಣವನ್ನು ಇಲ್ಲಿ ಬೆರೆಸುವುದು ಬೇಡ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಮ್ಮ ಚಿಂತನೆ ಮತ್ತು ಆಡಳಿತ ವೈಖರಿಯಿಂದಎಲ್ಲೋ ಒಂದು ಕಡೆ ನಾಡಿನ ಜನರ ಅಂತರಂಗದ ಭಾವನೆಯನ್ನು ಕೆದಕಿದರು. ಹಾಗಾಗಿಯೇ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದರು’ಎಂದು ಹೇಳಿದರು.ಈ ಮಾತನ್ನು ಸಭಿಕರು ವಿರೋಧಿಸಿದರು.

ADVERTISEMENT

ಇದಕ್ಕೂ ಮುನ್ನ ಗೋಷ್ಠಿಯಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ ಗುರೂಜಿ, ‘ಜಾತಿ, ಮತ, ಪಂಥಗಳು ಮತ್ತು ದ್ವೇಷ ಅಸೂಯೆಯಿಂದ ನಲುಗುತ್ತಿರುವ ಜಗತ್ತಿನ ಇಂದಿನ ಬೇಗುದಿಯನ್ನು ದೂರ ‌ಮಾಡಲು ಎಲ್ಲರೂ ಒಂದುಗೂಡಬೇಕು. ಪ್ರಪಂಚದಾದ್ಯಂತ ಬಸವಣ್ಣನವರ ವಚನ ಸಂದೇಶವನ್ನು ಸಾರುವ ಅಗತ್ಯವಿದೆ. ಸಮಾಜದಲ್ಲಿ ಕೆಲವರು ಸಂಘರ್ಷಗಳನ್ನು ಬಿತ್ತಿ ಅದರ ಫಸಲಿನಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ‌. ಆದರೆ, ಶರಣರು, ಎಲ್ಲ ಸಮುದಾಯ, ನಾಯಕರನ್ನು ಒಂದೆಡೆ ಸೇರಿಸುವ ಮೂಲಕ ಸಮನ್ವಯಕಾರರಾಗಿ ಇಂದು ಶಿವಪಥವನ್ನು ನಮಗೆ ತೋರಿಸಿದ್ದಾರೆ. ಅದರಲ್ಲಿ ಮುನ್ನಡೆಯುಬೇಕಾದ ಅಗತ್ಯವಿದೆ’ಎಂದು ಹೇಳಿದರು.

ಪ್ರಮಥ ಗಣಮೇಳದಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ಪೂಜೆ

ಸುತ್ತೂರು ಶಿವರಾತ್ರೀಶ್ವರ ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಜಗತ್ತಿನಾದ್ಯಂತ ಇಂದು ದ್ವೇಷಾಸೂಯೆ ತಾಂಡವವಾಡುತ್ತಿದೆ. ಈ ರಾಗ ದ್ವೇಷಗಳನ್ನು ದೂರ ಮಾಡಿ ನಮ್ಮನ್ನು ನಾವು ಬದಲಾವಣೆಗೆ ಒಳಪಡಿಸಿಕೊಳ್ಳಬೇಕು. ಹಾಗಾಗಿ ಇಂತಹ ಕಾರ್ಯಕ್ರಮ ಇಂದು ಹೆಚ್ಚು ಔಚಿತ್ಯಪೂರ್ಣವಾಗಿದೆ’ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಶೋಷಿತರ, ನೊಂದವರ ಪರವಾದ ಧರ್ಮ ಎಂದರೆ ಅದು ಲಿಂಗಾಯತ ಧರ್ಮ. ಇಂತಹ ಮೇರು ಮಟ್ಟದ ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವ ಧರ್ಮವನ್ನು ವಿಶ್ವಸಂಸ್ಥೆಯೂ ಮಾನ್ಯ ಮಾಡಿದೆ’ ಎಂದು ವಚನ ಸಾಹಿತ್ಯದ ಹೆಗ್ಗಳಿಕೆಯನ್ನು ಕೊಂಡಾಡಿದರು.

ಮತ್ತೊಬ್ಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಮನುಷ್ಯ ಮತ್ತೊಬ್ಬರ ಏಳಿಗೆ ಬಯಸಲು ಸಾಧ್ಯವಾಗದೇ ಹೋದರೆ ಕೇಡನ್ನು ಮಾತ್ರ ಬಯಸಬಾರದು’ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.