ADVERTISEMENT

ಕೈಗಾರಿಕಾ ಜಮೀನು 10 ವರ್ಷಕ್ಕೇ ಕ್ರಯಪತ್ರ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 18:16 IST
Last Updated 1 ಜನವರಿ 2022, 18:16 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಹಂಚಿಕೆ ಮಾಡುವ ಎರಡು ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನುಗಳ ನಿರ್ಬಂಧಿತ ಅವಧಿಯನ್ನು ಸಡಿಲಿಸಿ, 10 ವರ್ಷದಲ್ಲೇ ಶುದ್ಧ ಕ್ರಯಪತ್ರ ಮಾಡಿಕೊಡುವುದಕ್ಕೆ ಪೂರಕವಾಗಿ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದ್ದಾರೆ.

ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಅವರು, ‘ಈಗ ಇರುವ ಕಾಯ್ದೆಯ ಪ್ರಕಾರ ಕೈಗಾರಿಕಾ ಜಮೀನನ್ನು 99 ವರ್ಷಗಳವರೆಗೂ ಶುದ್ಧ ಕ್ರಯಪತ್ರ ಮಾಡಿಕೊಡಲು ಅವಕಾಶವಿಲ್ಲ. ಇದರಿಂದ ಹೂಡಿಕೆದಾರರಿಗೆ ತೊಂದರೆ ಆಗುತ್ತಿದೆ. ಇದರ ನಿವಾರಣೆಗೆ ನಿರ್ಬಂಧಿತ ಅವಧಿಯನ್ನು 10 ವರ್ಷಕ್ಕೆ ತಗ್ಗಿಸಲಾಗುವುದು’ ಎಂದಿದ್ದಾರೆ. ಹೂಡಿಕೆದಾರರು ರಾಜ್ಯದಲ್ಲಿ ಉದ್ಯಮ ಆರಂಭಿಸಲು ಹಿಂಜರಿಯುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ‍ಪ್ರಸ್ತಾವಕ್ಕೆ ಒಪ್ಪಿಗೆಯನ್ನೂ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎರಡೇ ವರ್ಷ ನಿರ್ಬಂಧ: ಕೆಐಎಡಿಬಿ ಹಂಚಿಕೆ ಮಾಡುವ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಿ, ಎರಡು ವರ್ಷಗಳವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ ಶುದ್ಧ ಕ್ರಯಪತ್ರ ಪಡೆಯಲು 10 ವರ್ಷಗಳವರೆಗೂ ಕಾಯಬೇಕಿಲ್ಲ. ಅಂತಹ ಉದ್ಯಮಿಗಳಿಗೆ ಎರಡೇ ವರ್ಷಕ್ಕೆ ಕ್ರಯಪತ್ರ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.