ಬೆಂಗಳೂರು: ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಹಾಗೂ ಉಗ್ರಗಾಮಿ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದ ಪ್ರಕರಣದಲ್ಲಿ ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ಸಂಘಟನೆಯ 17 ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಎನ್ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ಆರೋಪಿಗಳು: ಬೆಂಗಳೂರಿನ ಮಹಬೂಬ್ ಪಾಷ (48), ತಮಿಳುನಾಡು ಕಡಲೂರಿನ ಖ್ವಾಜಾ ಮೊಯಿದ್ದೀನ್, ಅಬ್ದುಲ್ ಸಮದ್, ತೌಫೀಕ್, ಸೈಯದ್ ಅಲಿ ನವಾಜ್, ಜಫರ್ ಅಲಿ, ಅಬ್ದುಲ್ ಶಮೀಮ್, ಇಮ್ರಾನ್ ಖಾನ್, ಮೊಹಮದ್ ಹನೀಫ್ ಖಾನ್, ಮೊಹಮದ್ ಮನ್ಸೂರ್ ಅಲಿ ಖಾನ್, ಸಲೀಂಖಾನ್, ಹುಸೇನ್ ಶರೀಫ್, ಇಜಾಜ್ ಪಾಷ, ಜಬೀವುಲ್ಲಾ, ಸೈಯದ್ ಫಸೂರ್ ರಹಮಾನ್, ಮೊಹಮದ್ ಜಿಯಾದ್ ಮತ್ತು ಎಂ.ಸಾದಿಕ್ ಪಾಷ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಂಗಳಡಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಶಂಕಿತ ಉಗ್ರ ಮಹಬೂಬ್ ಪಾಷ ಮತ್ತು ಆತನ 16 ಸಹಚರರ ವಿರುದ್ಧ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಸಿಸಿಬಿ ಎಫ್ಐಆರ್ ದಾಖಲಿಸಿತ್ತು.
‘ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ನೆಲೆಸಿದ್ದ ಮಹಬೂಬ್ ಪಾಷ, ಐಎಸ್ ಸಂಘಟನೆಗೆ ಸೇರಿದವನು. ಈತ ತನ್ನ ಗುರಪ್ಪನಪಾಳ್ಯದ ಮನೆಯಲ್ಲೇ ಸಹಚರರ ಸಭೆ ನಡೆಸಿ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ' ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.