ADVERTISEMENT

ಹುಣಸೆ, ಹಲಸಿನ ಹೊಸ ತಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 20:43 IST
Last Updated 20 ಮಾರ್ಚ್ 2021, 20:43 IST
‘ಶ್ರೀ’ ತಳಿ ಹಲಸಿನ ಹಣ್ಣು
‘ಶ್ರೀ’ ತಳಿ ಹಲಸಿನ ಹಣ್ಣು   

ತುಮಕೂರು: ನಗರದ ಹೊರವಲಯ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು (ಐಐಎಚ್‌ಆರ್‌) ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹೊಸ ಹುಣಸೆ ಹಣ್ಣಿನ ತಳಿಯನ್ನು ಗುರುತಿಸಿದೆ.

ಹುಣಸೆ ಬೆಳೆದ`ಲಕ್ಷ್ಮಣ' ಎಂಬ ರೈತನ ಹೆಸರನ್ನೇ ಈ ತಳಿಗೆ ಇಡಲಾಗಿದೆ. ಈ ತಳಿಯ ಹುಣಸೆಯಲ್ಲಿ ತಿರುಳು ಹೆಚ್ಚಾಗಿದ್ದು, ಹುಳಿ ಅಧಿಕ ಪ್ರಮಾಣದಲ್ಲಿರುತ್ತದೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಕರುಣಾಕರನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹುಣಸೆ ಜತೆ ‘ಶ್ರೀ’ ಎಂಬ ಹೊಸ ತಳಿಯ ಹಲಸಿನ ಹಣ್ಣನ್ನೂ ಪರಿಚಯಿಸಿದೆ ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಐಐಎಚ್‌ಆರ್‌ನಲ್ಲಿ ಶನಿವಾರ ಈ ತಳಿಗಳನ್ನು ಬಿಡುಗಡೆ ಮಾಡಲಾಯಿತು.

ADVERTISEMENT

ತುಮಕೂರು ತಾಲ್ಲೂಕು ಗೂಳೂರು ಹೋಬಳಿ ಎ.ಕೆ.ಕಾವಲ್‌ ಗ್ರಾಮದ ರವೀಂದ್ರ ಅವರ ಜಮೀನಿನಲ್ಲಿ ಈ ತಳಿ ಗುರುತಿಸಲಾಗಿದೆ. ಈ ಮರಕ್ಕೆ ಈಗ 12 ವರ್ಷ.

ಹಲಸಿನ ವೈಶಿಷ್ಟ್ಯ: ಹಣ್ಣಿನ ತೊಳೆ ಕೆಂಪು ಬಣ್ಣದಿಂದ ಕೂಡಿದ್ದು, ತಿನ್ನಲು ಬಲು ರುಚಿಕರ. ಕೆಂಪು ಬಣ್ಣದ ಹಲಸು ಮೇ ನಂತರ ಹಣ್ಣಾಗುತ್ತದೆ. ಆದರೆ ಹೊಸದಾಗಿ ಗುರುತಿಸಿರುವ ‘ಶ್ರೀ’ ಹಲಸು ಫೆಬ್ರುವರಿ ವೇಳೆಗೆ ಹಣ್ಣಾಗುವುದು ವಿಶೇಷ. ಹಳದಿ, ಬಿಳಿ ಬಣ್ಣದ ಹಲಸು ಮಾರ್ಚ್ ವೇಳೆಗೆ ಹಣ್ಣಾಗುತ್ತದೆ.

‘ಶ್ರೀ ತಳಿಯ ಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ ಪೋಷಕಾಂಶ ಅಧಿಕ ಪ್ರಮಾಣದಲ್ಲಿ ಇದೆ. 100 ಗ್ರಾ ಹಣ್ಣಿನಲ್ಲಿ ಶೇ 8.6ರಷ್ಟು ಈ ಅಂಶ ಇದೆ. ಇದು ಆಂಟಿ ಆಕ್ಸಿಡೆಂಟ್ ಹೊಂದಿದೆ’ ಎಂದು ಕರುಣಾಕರನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ‘ಸಿದ್ದು’ ಹಾಗೂ ‘ಶಂಕರ’ ಹೆಸರಿನಲ್ಲಿ ಕೆಂಪು ಹಲಸಿನ ತಳಿಗಳು ಬಿಡುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.