ADVERTISEMENT

ಸಾಮಾಜಿಕ ಗಣತಿ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ: ಜಯಪ್ರಕಾಶ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 12:27 IST
Last Updated 8 ಸೆಪ್ಟೆಂಬರ್ 2021, 12:27 IST
ಮಾಜಿ ಸಚಿವ ಕೆ.ಜಯಪ್ರಕಾಶ್‌ ಹೆಗ್ಡೆ
ಮಾಜಿ ಸಚಿವ ಕೆ.ಜಯಪ್ರಕಾಶ್‌ ಹೆಗ್ಡೆ   

ಉಡುಪಿ: ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸುವ ಪ್ರತಿ ವರದಿಯನ್ನು ಸದಸ್ಯ ಕಾರ್ಯದರ್ಶಿ ಅಧಿಕೃತಗೊಳಿಸದ ಹೊರತು ಸರ್ಕಾರಕ್ಕೆ ಸಲ್ಲಿಸಲು ಸಾದ್ಯವಿಲ್ಲ. ಈ ಕಾರಣದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಬುಧವಾರ ನಗರ ಹೊರವಲಯದ ಅಮೃತ್ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ‘ಅಂತ್ಯೋದಯ’ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗದ ಕುರಿತು ಚರ್ಚೆಗಳು ನಡೆಯುತ್ತಿವೆ. ವರದಿ ಸಲ್ಲಿಕೆಗೆ ಕಾನೂನಾತ್ಮಕ ತೊಡಕುಗಳಿರುವ ಕಾರಣ ಸಲ್ಲಿಕೆಯಾಗಿಲ್ಲ ಎಂದರು.

ಮಾಧ್ಯಮಗಳಲ್ಲಿ ‘ಜಾತಿ ಜನಗಣತಿ’ಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ವಾಸ್ತವವಾಗಿ ಅದು ಜಾತಿ ಜನಗಣತಿ ಅಲ್ಲ; ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ. ವ್ಯಕ್ತಿಯೊಬ್ಬನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಸೇರಿದಂತೆ 54 ಬಗೆಯ ಸಮಗ್ರ ಮಾಹಿತಿ ವರದಿಯಲ್ಲಿದೆ ಎಂದರು.

ADVERTISEMENT

ಪುಸ್ತಕ ಮುದ್ರಣ: ಯಾವ ಜಾತಿಗಳು ಯಾವ ಪ್ರವರ್ಗದಡಿ ಬರುತ್ತವೆ ಎಂಬ ಮಾಹಿತಿಯನ್ನೊಳಗೊಂಡ ಚಿಕ್ಕ ಪುಸ್ತಕವನ್ನು ಮುದ್ರಿಸಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ವಿತರಿಸಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ. ಇದರಿಂದ ಜನಸಾಮಾನ್ಯರಿಗೆ ತಮ್ಮ ಜಾತಿ ಯಾವ ಪ್ರವರ್ಗಕ್ಕೆ ಸೇರಿದೆ ಎಂಬ ಮಾಹಿತಿ ಪಂಚಾಯಿತಿಯಲ್ಲಿ ಸಿಗಲಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.