ADVERTISEMENT

ಜೆಡಿಎಸ್‌ ಮುಖಂಡನ ಬರ್ಬರ ಹತ್ಯೆ, ಘಟನೆಗೆ ಬೆಚ್ಚಿಬಿದ್ದ ಮದ್ದೂರು ಜನತೆ

ನಾಲ್ಕು ಗಂಟೆ ಸಂಚಾರ ಅಸ್ತವ್ಯಸ್ತ: ಬಂದ್ ವಾತಾವರಣ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 7:07 IST
Last Updated 25 ಡಿಸೆಂಬರ್ 2018, 7:07 IST
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು   

ಮದ್ದೂರು: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ, ಜೆಡಿಎಸ್‌ ಮುಖಂಡ ತೊಪ್ಪನಹಳ್ಳಿ ಪ್ರಕಾಶ್‌ (48) ಅವರ ಬರ್ಬರ ಹತ್ಯೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಗಂಟೆಗಳ ಕಾಲ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ತೊಪ್ಪನಹಳ್ಳಿ ಪ್ರಕಾಶ್‌ ಅವರನ್ನು ಪಟ್ಟಣದ ಪ್ರವಾಸಿಮಂದಿರ ವೃತ್ತದ ಬಳಿ ಸೋಮವಾರ ಸಂಜೆ ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು, ತೊಪ್ಪನಹಳ್ಳಿ, ಕೆ.ಹೊನ್ನಲಗೆರೆ ಮುಂತಾದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕೊಲೆಗಾರರನ್ನು ಬಂಧಿಸುವವರೆಗೆ ವಾಹನ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಪ್ರತಿಭಟನೆ ನಡೆಯಿತು. ಹೆದ್ದಾರಿಯ ಎರಡೂ ಕಡೆ 10 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ADVERTISEMENT

ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಗೆಜ್ಜಲಗೆರೆ ಬಳಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಜನರನ್ನು ಸಮಾಧಾನ ಮಾಡಲು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಡೆಸಿದ ಪ್ರಯತ್ನ ವಿಫಲಾಯಿತು.

ತೊಪ್ಪನಹಳ್ಳಿ ಪ್ರಕಾಶ್‌

ಸಿ.ಎಂ.ಗೆ ಆಪ್ತರು: ಪ್ರಕಾಶ್‌ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಆಪ್ತರೂ ಆಗಿದ್ದು, ತಾಲ್ಲೂಕಿನಲ್ಲಿ ಪ್ರಭಾವಿ ಮುಖಂಡರಾಗಿದ್ದರು.

ಸೋಮವಾರ ಸಂಜೆ ಪ್ರಕಾಶ್‌ ಅವರು, ಪ್ರವಾಸಿಮಂದಿರದಲ್ಲಿ ಸ್ನೇಹಿತರೊಂದಿಗೆ ಕೆಲ ಸಮಯದ ಕಾಲ ಕಳೆದಿದ್ದಾರೆ. ನಂತರ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿರುವ ಎಳನೀರು ಮಾರುಕಟ್ಟೆಯಲ್ಲಿ ಹಣ ಪಡೆದು ಬರುವುದಾಗಿ ಹೇಳಿ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ಹೊಂಚುಹಾಕಿ ಕಾಯುತ್ತಿದ್ದ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಪ್ರಕಾಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.

ಕೊಲೆಗೆ ಯತ್ನ: ಇದಕ್ಕೂ ಮೊದಲು ಪ್ರಕಾಶ್‌ ಮೇಲೆ ಕೊಲೆ ಯತ್ನ ನಡೆದಿತ್ತು. ಆಗ ಪಾರಾಗಿದ್ದರು. ಇದೇ ಸ್ಥಳದಲ್ಲಿ 2016ರ ಡಿಸೆಂಬರ್‌ 24ರಂದೇ ಜೋಡಿ ಕೊಲೆ ನಡೆದಿತ್ತು. ಈಗ ಮತ್ತೊಂದು ಕೊಲೆ ನಡೆದಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಮದ್ದೂರಿಗೆ ಭೇಟಿ ನೀಡಿ ಪ್ರಕಾಶ್‌ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.