ಬೆಂಗಳೂರು:ರಾಜಕೀಯ ಹಗ್ಗ ಜಗ್ಗಾಟದಿಂದಾಗಿ ಮೈತ್ರಿ ಪಡೆಯ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಬೀಡುಬಿಟ್ಟಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ರಮಡಾ ಹೋಟೆಲ್ನಲ್ಲಿ ತಂಗಿರುವ ಬಿಜೆಪಿ ಶಾಸಕರು ಸೋಮವಾರ ಬೆಳಿಗ್ಗೆ ಯೋಗಾಭ್ಯಾಸ ನಡೆಸಿದ್ದಾರೆ.
ಹಿಂದಿನ ವಾರ ಹೊಟೇಲ್ನಲ್ಲಿ ತಂಗಿದ್ದ ವೇಳೆ ಕಾಲ ಕಳೆಯಲು ಭಜನೆ, ಸಂಗೀತ ಕಾರ್ಯಕ್ರಮ ಹಾಗೂ ಮೈದಾನದಲ್ಲಿ ಕ್ರಿಕೆಟ್ ಆಟದ ಮೊರೆ ಹೋಗಿದ್ದ ಶಾಸಕರು ಇಂದು ಯೋಗಾಭ್ಯಾಸ ಮಾಡಿದ್ದಾರೆ.
ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಅವರ ಮನವೊಲಿಕೆಗೆ ಎರಡೂ ಪಕ್ಷಗಳ ನಾಯಕರು ಕೊನೆಯ ಕಸರತ್ತನ್ನೂ ನಡೆಸಿದ್ದಾರೆ. ಆದರೆ, ಆ ಎಲ್ಲಾ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಿಶ್ವಾಸಮತ ಪ್ರಕ್ರಿಯೆಗೆ ಸೋಮವಾರ ಇತಿಶ್ರೀ ಹಾಡಬೇಕು ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಶುಕ್ರವಾರ ಕಪಾಲದಲ್ಲಿ ಸಿಎಂಗೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ ಸೋಮವಾರವೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸೋಣ ಎಂದು ಸಭಾಧ್ಯಕ್ಷರಿಗೆ ಭರವಸೆ ನೀಡಿದ್ದರು. ಇದಾದ ಬಳಿಕ ಶುಕ್ರವಾರ ರಾತ್ರಿ 8.20ರ ವರೆಗೆ ನಡೆದ ಕಲಾಪವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದ್ದರು.
ಇಂದು ಮತ್ತೆ ಕಲಾಪ ಆರಂಭವಾಗಲಿದ್ದು, ಮೈತ್ರಿ ಹಾಗೂ ಬಿಜೆಪಿ ನಾಯಕರ ದೃಷ್ಟಿ ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.