ADVERTISEMENT

ನಾನೇಕೆ ಕಾಲು ಕೆರೆದು ಜಗಳ ತೆಗೆಯಲಿ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 7:55 IST
Last Updated 19 ಅಕ್ಟೋಬರ್ 2021, 7:55 IST
   

ಕಲಬುರಗಿ: ‘ನಾನು ಯಾರ ಬಳಿಯೂ ಕಾಲು ಕೆರೆದು ಜಗಳಕ್ಕೆ ಹೋಗಿಲ್ಲ. ನನಗೆ ಮಾಡಲು ಸಿಕ್ಕಾಪಟ್ಟೆ ಕೆಲಸಗಳಿವೆ. ಮೊದಲು ಸಿದ್ದರಾಮಯ್ಯ ಅವರೇ ಜಗಳಕ್ಕೆ ಬರುತ್ತಾರೆ‘ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಲು ನಗರದ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೇನು ಮಾಡಲು ಬೇರೆ ಕೆಲಸ ಇಲ್ವಾ? ನಾನೇಕೆ ಅವರ ಉಸಾಬರಿಗೆ ಹೋಗಲಿ? ಅಂತಿಮವಾಗಿ ನಾನು ಜಗಳಕ್ಕೆ ಮಂಗಳಾರತಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ’ ಎಂದರು.

ಜಮೀರ್ ನನ್ನ ಸ್ನೇಹಿತನಲ್ಲ: ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ತಮ್ಮನ್ನು ಪದೇ ಪದೇ ಟೀಕಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಜಮೀರ್ ಅಹ್ಮದ್ ಈಗ ನನ್ನ ಸ್ನೇಹಿತ ಅಲ್ಲ. ಹಳೆಯ ಸ್ನೇಹಿತ. ಅವರ ಬಗ್ಗೆ ನಾನು ಮಾತಾಡುವುದಿಲ್ಲ. ಮೇಲೆ ದೇವರಿದ್ದಾನೆ. ಅವನೇ ನೋಡಿಕೊಳ್ಳುತ್ತಾನೆ’ ಎಂದು ಆಕಾಶದತ್ತ ಬೆರಳು ತೋರಿದರು.

ADVERTISEMENT

ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ: ಸಿಂದಗಿಯಲ್ಲಿ ಜೆಡಿಎಸ್–ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದರು.

ಕಾಂಗ್ರೆಸ್–ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ಈ ರಾಜ್ಯದಲ್ಲಿ ಎರಡೂ ಪಕ್ಷಗಳನ್ನು ಅಧಿಕಾರದಿಂದ ಕಿತ್ತು ಹಾಕಲು ರಾಜ್ಯದ ಜನತೆ ಮನಸ್ಸು ಮಾಡಬೇಕಿದೆ. ಎರಡೂ ಪಕ್ಷಗಳು ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.