ಬೆಂಗಳೂರು: ‘ನನ್ನ ರಾಜಕೀಯ ಏಳಿಗೆ ಸಹಿಸದ ಮತ್ತು ನಾನು ಈ ಹಿಂದೆ ಇದ್ದ ಪಕ್ಷದವರೇ (ಜೆಡಿಎಸ್) ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ.
‘ಈ ಸಂದರ್ಭದಲ್ಲಿ ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಅವರು ಭಾವಿಸಿರಲಿಲ್ಲ. ನನ್ನ ಏಳಿಗೆ ಸಹಿಸಲು ಅವರಿಗೆ ಆಗೆ ಹೊಟ್ಟೆಯುರಿ ಆಗಿದೆ. ಹೀಗಾಗಿ ದಾಳಿ ಮಾಡಿಸಿದ್ದಾರೆ’ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
‘ನಾನು ಒಂದು ಒಳ್ಳೆಯ ಮನೆ ಕಟ್ಟಿಸಿರುವುದು ಅವರಿಗೆ ಸಹಿಸಲು ಆಗಲಿಲ್ಲ. ಅವರನ್ನು ಬಿಟ್ಟು ಬೇರೆ ಯಾರೂ ಮನೆ ಕಟ್ಟಬಾರದು ಎಂಬುದು ಅವರ ಉದ್ದೇಶ. ಹೀಗಾಗಿ ನಾನು ಮನೆ ಕಟ್ಟಿದ ಮಾಹಿತಿಯನ್ನೇ ಮುಂದಿಟ್ಟುಕೊಂಡೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದರು’ ಎಂದು ಹೇಳಿದರು.
‘ಇಂತಹ ದಾಳಿಗಳಿಂದ ನನ್ನನ್ನು ಹೆದರಿಸಲು ಅಥವಾ ದುರ್ಬಲಗೊಳಿಸಲು ಸಾಧ್ಯವಿಲ್ಲ, ನನ್ನ ರಾಜಕೀಯ ಭವಿಷ್ಯವನ್ನೂ ಮುಗಿಸಲು ಸಾಧ್ಯವಿಲ್ಲ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಮನೆಯ ಮೇಲಿನ ದಾಳಿಗೂ ಐಎಂಎ ಹಗರಣಕ್ಕೂ ಸಂಬಂಧವಿಲ್ಲ. ಹಿಂದೆ ಡಿ.ಕೆ.ಶಿವಕುಮಾರ್ ಮನೆ ಮೇಲೂ ದಾಳಿ ಆಗಿತ್ತು. ಅದಕ್ಕೂ ಐಎಂಎ ಹಗರಣಕ್ಕೂ ಸಂಬಂಧ ಇದೆ ಎಂದು ಹೇಳಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಜಮೀರ್ ವಿಲಾಸಿ ಬಂಗಲೆ: ಇ.ಡಿ ಕೆಂಗಣ್ಣು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.