
ಬೆಂಗಳೂರು: ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಪ್ರಮುಖರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಿರುವ ಜೆಡಿಎಸ್ ವರಿಷ್ಠರು, ಆ ಸ್ಥಾನಕ್ಕೆ ಮಾಜಿ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರನ್ನು ನೇಮಿಸಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಪಕ್ಷದ ಮುಂಚೂಣಿ ಘಟಕಗಳಿಗೆ ಹೊಸಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ಸ್ಥಾನ ಸಿಗದ ಕಾರಣಕ್ಕೆ ದಳಪತಿಗಳ ವಿರುದ್ಧ ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರವಿದ್ದರು. ಅಲ್ಲದೆ, ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿದ್ದರು. ಅಂತಿಮವಾಗಿ ಅವರನ್ನು ಕೈಬಿಟ್ಟು ಕೃಷ್ಣಾರೆಡ್ಡಿಗೆ ಜೆಡಿಎಸ್ ವರಿಷ್ಠರು ಸ್ಥಾನ ನೀಡಿದ್ದಾರೆ. ಶಾಸಕ ಎ. ಮಂಜು ಅವರನ್ನು ಈ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ನೂತನ ಸಮಿತಿಯಲ್ಲಿ 20 ಸದಸ್ಯರಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲಿದೆ ಎಂದು ಜೆಡಿಎಸ್ ತಿಳಿಸಿದೆ.
ಪ್ರಚಾರ ಸಮಿತಿಗೆ ವೈ.ಎಸ್. ವಿ. ದತ್ತ, ಶಿಸ್ತುಪಾಲನಾ ಸಮಿತಿಗೆ ಮಾಜಿ ಸಚಿವ ಡಿ. ನಾಗರಾಜಯ್ಯ ಅವರನ್ನು ನೇಮಕ ಮಾಡಲಾಗಿದೆ.
ಪ್ರಮುಖರ ಸಮಿತಿಯಲ್ಲಿ ಮಾಜಿ ಶಾಸಕ ರಾಜವೆಂಕಟಪ್ಪ ನಾಯಕ ದೊರೆ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಆಲ್ಕೋಡ ಹನುಮಂತಪ್ಪ, ಎಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಕೆ.ಎಂ. ತಿಮ್ಮರಾಯಪ್ಪ, ಎ. ಮಂಜುನಾಥ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೆ.ಬಿ. ಪ್ರಸನ್ನಕುಮಾರ್, ಶಾಸಕರಾದ ಎಚ್.ಡಿ. ರೇವಣ್ಣ, ಕರೆಮ್ಮ ನಾಯಕ, ನೇಮಿರಾಜ ನಾಯಕ, ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಪಕ್ಷದ ನಾಯಕ ಸಿ.ವಿ. ಚಂದ್ರಶೇಖರ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ವೈ.ಎಸ್.ವಿ. ದತ್ತ ನಾಯಕತ್ವದ ಪ್ರಚಾರ ಸಮಿತಿಯಲ್ಲಿ ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಸುರೇಶ್ ಗೌಡ, ಕೆ. ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಭೀಮನಗೌಡ (ರಾಜುಗೌಡ) ಪಾಟೀಲ್, ಜಿ.ಡಿ. ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಎಂ.ಆರ್. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಕೆ. ವಿವೇಕಾನಂದ, ಸಿ.ಎನ್. ಮಂಜೇಗೌಡ, ಸೂರಜ್ ರೇವಣ್ಣ, ಹಿರಿಯ ನಾಯಕ ಸುಧಾಕರ್ ಎಸ್.ಶೆಟ್ಟಿ ಸದಸ್ಯರಾಗಿದ್ದಾರೆ.
ಡಿ. ನಾಗರಾಜಯ್ಯ ನೇತೃತ್ವದ ಶಿಸ್ತುಪಾಲನಾ ಸಮಿತಿಯಲ್ಲಿ ಮಾಜಿ ಸಂಸದ ಕುಪೇಂದ್ರರೆಡ್ಡಿ, ಶಾಸಕರಾದ ಜಿ.ಕೆ. ವೆಂಕಟಾಶಿವಾರೆಡ್ಡಿ, ಎಚ್. ಟಿ. ಮಂಜುನಾಥ್, ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್, ಕೆ. ಮಹದೇವ, ಆರ್. ಚೌಡರೆಡ್ಡಿ, ಸುಧಾಕರ್ ಲಾಲ್, ಎಲ್.ಎನ್. ನಿಸರ್ಗ ನಾರಾಯಣಸ್ವಾಮಿ, ಕೆ. ಶ್ರೀನಿವಾಸಮೂರ್ತಿ ಸದಸ್ಯರಾಗಿದ್ದಾರೆ.
ರಾಜಕೀಯ ವ್ಯವಹಾರಗಳ ಸಮಿತಿ: ಎಚ್ಡಿಕೆ ಅಧ್ಯಕ್ಷ
ಜೆಡಿಎಸ್ ಪಕ್ಷದ ಉನ್ನತ ಮಟ್ಟದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷರನ್ನಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ನೇಮಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯ್ಕ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಸಾ.ರಾ. ಮಹೇಶ್ ವೆಂಕಟರಾವ್ ನಾಡಗೌಡ ಶಾಸಕರಾದ ಎಂ.ಟಿ. ಕೃಷ್ಣಪ್ಪ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಯುವ ಜನತಾದಳ ರಾಜ್ಯ ಘಟಕದ ನಿಖಿಲ್ ಕುಮಾರಸ್ವಾಮಿ ಅವರು ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.