ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ಜಂಟಿ ಪ್ರವೇಶ ಪರೀಕ್ಷೆ–2025ರ ಫಲಿತಾಂಶದಲ್ಲಿ (ಜೆಇಇ ಮುಖ್ಯ–2) ಬೆಂಗಳೂರಿನ ಕಸವನಹಳ್ಳಿಯ ನಾರಾಯಣ-ಕೋ-ಕಾವೇರಿ ಭವನ ಕಾಲೇಜಿನ ವಿದ್ಯಾರ್ಥಿ ಕುಶಾಗ್ರ ಗುಪ್ತ 100 ಪರ್ಸೆಂಟೈಲ್ ಗಳಿಸುವ ಮೂಲಕ ಕರ್ನಾಟಕಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.
ಪತ್ರಿಕೆ-1 (ಬಿ.ಇ/ಬಿ.ಟೆಕ್)ನಲ್ಲಿ 100 ಪರ್ಸೆಂಟೈಲ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿಯಲ್ಲಿ ಪ್ರಕಟವಾಗಿದ್ದ ಜೆಇಇ (ಮುಖ್ಯ-1) ಫಲಿತಾಂಶದಲ್ಲೂ ಕುಶಾಗ್ರ 100 ಪರ್ಸೆಂಟೈಲ್ ಗಳಿಸಿದ್ದರು.
ಫಲಿತಾಂಶ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ರ್ಯಾಂಕ್ ಗಳಿಸುವ ಗುರಿಗಿಂತ ಓದಿನ ಸಿದ್ಧತೆಗೆ ಆದ್ಯತೆ ನೀಡಿದ್ದೆ. ಹಿಂದಿನ ಫಲಿತಾಂಶಕ್ಕಿಂತ ಮುಂದಿನ ಪರೀಕ್ಷೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಛಲ ಇಟ್ಟುಕೊಂಡಿದ್ದೆ. ಕಾಲೇಜಿನಲ್ಲಿ ನಿತ್ಯವೂ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಪ್ರತಿದಿನ ಹೊಸ ಪ್ರಶ್ನೆಗಳನ್ನು ಹುಡುಕುತ್ತಿದ್ದೆವು. 12ರಿಂದ 13 ಗಂಟೆ ಓದುತ್ತಿದ್ದೆ. ಇಂತಹ ಪರಿಶ್ರಮವೇ ಉನ್ನತ ಸ್ಥಾನ ಪಡೆಯಲು ದಾರಿಯಾಯಿತು’ ಎಂದರು.
ಕುಶಾಗ್ರ ಅವರು ಜೆಇಇ ಅಡ್ವಾನ್ಸ್ಗೆ ಸಿದ್ಧತೆ ನಡೆಸಿದ್ದು, ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಷಯ ಅಧ್ಯಯನ ನಡೆಸುವ ಆಶಯ ಹೊಂದಿದ್ದಾರೆ. ಗಣಿತ, ಭೌತವಿಜ್ಞಾನ, ಕ್ರೀಡೆ ಇಷ್ಟ ಪಡುವ ಅವರು, ಎಂಜಿನಿಯರ್ ಕ್ಷೇತ್ರದತ್ತ ಹೆಚ್ಚಿನ ಒಲವು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.