ಚಿತ್ರದುರ್ಗ: ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಬಳಿಕ ಅತಿ ಹೆಚ್ಚು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ. ಅವರಂತೆ 11 ಬಾರಿ ಗೆಲುವು ಸಾಧಿಸಿದವರು ಬಿಜೆಪಿಯಲ್ಲಿ ಯಾರಿದ್ದೀರಿ ಹೇಳಿ ಎಂದು ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
‘ಖರ್ಗೆ ರಾಜಕೀಯವಾಗಿ ಆರಿದ ದೀಪ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆಗೆ ಮನಿಯಪ್ಪ ಸೋಮವಾರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಟೀಲ್ ಇನ್ನೂ ಚಿಕ್ಕವರು. ಘನತೆಗೆ ತಕ್ಕಂತೆ ಮಾತನಾಡುವ ಸಂಸ್ಕೃತಿ ಕಲಿಯುವ ಅಗತ್ಯವಿದೆ. ಅನುಭವದ ಕೊರತೆ ಇರುವಂತೆ ಕಾಣುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಚುನಾವಣೆಯಲ್ಲಿ ಸೋಲು ಕಂಡಿರಲಿಲ್ಲವೇ?’ ಎಂದು ಕುಟುಕಿದರು.
‘ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರುವ ಎಲ್ಲ ಯೋಜನೆ, ಕಾಯ್ದೆಗಳು ಜನವಿರೋಧಿಯಾಗಿವೆ. ಉತ್ತರ ಭಾರತದಲ್ಲಿ ಇತ್ತೀಚೆಗೆ ನಡೆದ ಹಲವು ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣುತ್ತಿದೆ. ಹಿಂದೂ–ಮುಸ್ಲಿಮರನ್ನು ಒಡೆದಾಳಲು ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ದೇಶದ ಜನರು ಮೋದಿಗೆ ಪಾಠ ಕಲಿಸುವ ಸಮಯ ಬಂದಿದೆ’ ಎಂದು ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.