ಮಂಗಳೂರು: ಖ್ಯಾತ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾ ಲನಾಥ್ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನಡೆಯಲಿದೆ.
'ನಮ್ಮ ತಂದೆಯವರ ಹುಟ್ಟೂರು ಸಜಿಪ ಮಿತ್ತಕೆರೆಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ' ಎಂದು ಗೋಪಾಲನಾಥ್ ಅವರ ಕಿರಿಯ ಮಗ ಮಣಿಕಾಂತ್ ಕದ್ರಿ ತಿಳಿಸಿದರು.
ಮಂಗಳೂರಿನ ಪದವಿನಂಗಡಿ ದೇವಿ ಕಟ್ಟೆಯಿಂದ ಸೋಮವಾರ ಬೆಳಿಗ್ಗೆ 9 ಗಂಟೆಗೆ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ. 10 ಗಂಟೆಗೆ ಮೆರವಣಿಗೆ ಪುರಭವನ ತಲುಪಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಪಾರ್ಥಿವ ಶರೀರವನ್ನು ಸಜಿಪಕ್ಕೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.
ಸೋಮವಾರ ಸಿವಿಲ್ ಐಡಿ ಲಭ್ಯ:ಗೋಪಾಲನಾಥ್ ಅವರ ಹಿರಿಯ ಮಗ ಗುರುಪ್ರಸಾದ್ ಕುವೈತ್ನಲ್ಲಿದ್ದು, ವೀಸಾ 'ಸ್ಟಾಂಪಿಂಗ್' ಮುಗಿದು ಸಿವಿಲ್ ಐಡಿ ದೊರಕದ ಕಾರಣ ಇನ್ನೂ ಮಂಗಳೂರು ತಲುಪಿಲ್ಲ.
ಭಾನುವಾರ ಮಧ್ಯಾಹ್ನ 'ಅಣ್ಣ ಗುರುಪ್ರಸಾದ್ ಅವರಿಗೆ ಸಿವಿಲ್ ಐಡಿ ದೊರಕಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ' ಎಂದು ಮಣಿಕಾಂತ್ ಕದ್ರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.