ADVERTISEMENT

ನಿಮಗೆ ಸಾಕ್ಷಿ ಪ್ರಜ್ಞೆ ಇಲ್ಲವೇ: ಪ್ರೊ.ಆರ್‌.ಕೆ.ಹುಡಗಿ ಪ್ರಶ್ನೆ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 6 ಫೆಬ್ರುವರಿ 2020, 19:45 IST
Last Updated 6 ಫೆಬ್ರುವರಿ 2020, 19:45 IST
ಪ್ರೊ.ಆರ್‌.ಕೆ.ಹುಡಗಿ
ಪ್ರೊ.ಆರ್‌.ಕೆ.ಹುಡಗಿ   

ಡಾ.ಚನ್ನಣ್ಣ ವಾಲೀಕಾರ ವೇದಿಕೆ (ಕಲಬುರ್ಗಿ): ‘ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ ಎಂದು ದೊಡ್ಡ ದೊಡ್ಡ ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವ ಮಹಾನ್‌ ಪಂಡಿತರೇ ನಿಮ್ಮ ಮಕ್ಕಳನ್ನು ಯಾವ ಶಾಲೆಗಳಿಗೆ ಕಳುಹಿಸುತ್ತಿದ್ದೀರಿ. ನಿಮಗೆ ಸಾಕ್ಷಿಪ್ರಜ್ಞೆ ಇಲ್ಲವೇ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಹೋರಾಟಗಾರ ಪ್ರೊ.ಆರ್‌.ಕೆ.ಹುಡಗಿ
ಪ್ರಶ್ನಿಸಿದ್ದಾರೆ.

ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ‘ಕಲಬುರಗಿ ಜಿಲ್ಲಾದರ್ಶನ’ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊದಲು ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ, ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸಿ’ ಎಂದು ಅವರು ಒತ್ತಾಯಿಸಿದರು.

ADVERTISEMENT

ರಾಜೀನಾಮೆ ನೀಡಿ: ‘ಶೃಂಗೇರಿಯಲ್ಲಿ ಈಚೆಗೆ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡಲು ನಿರಾಕರಿಸಿದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರು, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಿ.ಟಿ. ರವಿ ಅವರೇ, ನೀವು ಸರ್ವಾಧಿಕಾರಿಯಂತೆ ವರ್ತಿಸಿದ್ದೀರಿ.ನಿಮ್ಮ ಜೇಬಿನಿಂದ ಹಣ ಕೊಡಿ ಎಂದು ಯಾರೂ ನಿಮ್ಮನ್ನು ಕೇಳಿರಲಿಲ್ಲ. ಜನರು ಸರ್ಕಾರಕ್ಕೆ ತುಂಬಿದ ತೆರಿಗೆ ಹಣವನ್ನು ನೀವು ಬಿಡುಗಡೆ ಮಾಡಲಿಲ್ಲ. ಇದು ಕನ್ನಡಿಗರ ಸ್ವಾಭಿಮಾನದ ಪ್ರಾತಿನಿಧಿಕ ಸಂಸ್ಥೆಗೆ ಮಾಡಿದ ಅನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮ್ಮೇಳನ ನಡೆಸಿದರೆ, ಪೆಟ್ರೋಲ್‌ ಬಾಂಬ್‌ ಹಾಕ್ತೀವಿ ಎಂದು ಕೆಲವರು ಬೆದರಿಸಿದ್ದರು. ಅದರ ವಿರುದ್ಧವೂ ಪರಿಷತ್‌ ಅಧ್ಯಕ್ಷರಾಗಿ ಎಲ್ಲಿಯೂ ಮಾತನಾಡಲಿಲ್ಲ. ಹೀಗಾಗಿ ಶ್ರೀ ಶ್ರೀ ಪೂಜ್ಯ ಮನು ಬಳಿಗಾರ್‌ ಹಾಗೂ ಸಚಿವ ರವಿ ಅವರೇ ಈ ಸಮ್ಮೇಳನ ಮುಗಿದ ತಕ್ಷಣ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.